ಪುಟಗಳು

ಇವನಿಗೆ ಭರ್ತಿ 107 ಹೆಂಡತಿಯರು...185 ಮಕ್ಕಳು

ಒಂದು ಪತ್ನಿಯೊಂದಿಗೆ ಜೀವನ ನಡೆಸಲಾಗದವರಿಗೆ ಇವನೊಂದು ಅಚ್ಚರಿ. ಇನ್ನೊಂದು ಮದುವೆಯ ಕನಸು ಕಾಣುವರಿಗೆ ಇವನು ಸ್ಪೂರ್ತಿಯಾಗಬಲ್ಲ. ಆರತಿಗೊಬ್ಬ ಕೀರುತಿಗೊಬ್ಬ, ನಾವಿಬ್ಬರು ನಮಗೊಂದು ಮಗು ಅನ್ನುವರಿಗೆ ಇವನು... ಹೀಗೆ ಇವನ ಬಗ್ಗೆ ಹೇಳಿದಷ್ಟು ಕಥೆ ಮುಗಿಯೋದಿಲ್ಲ.. ಮುಂದೆ ಓದಿಕೊಳ್ಳಿ.

* ಯಾರಿವನು?
ಹೆಸರು ಬೆಲ್ಲೊ ಮಸಬಾ. ನೈಜೀರಿಯಾದ ಪ್ರಜೆ. ಇಸ್ಲಾಂ ಧರ್ಮ.

* ಏನು ಇವನ ಸ್ಪೆಷಲ್?
ಸಾಮನ್ಯ ವಿಶೇಷ ಅಲ್ಲ. ಈ ಭೂಪ 107 ಹೆಂಡತಿಯರಿಗೆ ಮುದ್ದಿನ ಗಂಡ.

* ಹಾಗಾದರೆ ಅವನಿಗೆ ಮಕ್ಕಳೆಷ್ಟು?

ಹೆಂಡತಿಯರಿಗೆ ಹೋಲಿಸಿದರೆ ಜಾಸ್ತಿ ಏನಲ್ಲ. ಕೇವಲ 185 ಮಕ್ಕಳ ಅಪ್ಪ.

* ಅವನ ಪ್ರಾಯ?
ಇನ್ನೂ 87ರ ಹರೆಯ!

* ಅಬ್ಬಾ..! ಇವ್ರನ್ನೆಲ್ಲ ಹೇಗೆ ಸಾಕ್ತಾನೆ? ಏನು ಕೆಲಸ ಅವನಿಗೆ?
ವೃತ್ತಿಯಲ್ಲಿ ನಾಟಿ ವೈದ್ಯ. ಸ್ವಲ್ಪ ಭೂಮಿ ಇದೆ. ಇವನು ಅಲ್ಲಿನ ರಾಜಕಾರಣಿಗಳಿಗಿಂತ ಫೇಮಸ್. ಒಂದು ಲೆಕ್ಕದಲ್ಲಿ ಹೇಳುವುದಾದರೆ ಸೆಲೆಬ್ರೆಟಿ.

* ಹಾಗಾದರೆ ಅವನ ಮನೆ ಹೇಗಿದೆ?
ಅದು ದೊಡ್ಡ ಮನೆ. 85 ರೂಂಗಳಿವೆ. ಅದರಲ್ಲಿ ತನ್ನ ಎಲ್ಲಾ ಪತ್ನಿ ಮತ್ತು ಮಕ್ಕಳೊಂದಿಗೆ ಇದ್ದಾನೆ.

* ಇವನು ಅಷ್ಟು ಮದುವೆ ಆಗಿರೋದಕ್ಕೆ ಯಾರೂ ಕೇಸ್ ಹಾಕಿಲ್ಲವೇ? ಅಲ್ಲಿನ ಸರಕಾರ, ಕೋರ್ಟ್ ಚಕಾರ ಎತ್ತಿಲ್ಲವೇ?
ಚಕಾರ ಎತ್ತುವರಿದ್ರು. ಅವನ ವಿರುದ್ಧ ಸಾಕಷ್ಟು ಪ್ರಕರಣ ದಾಖಲಾಗಿತ್ತು. ಆದರೆ ಕೋರ್ಟ್ ಗೆ ಆತನ ಪತ್ನಿಯರೇ ಬಂದು ಬಚಾವ್ ಮಾಡಿದ್ದಾರೆ. ಅವನ ಪತ್ನಿಯರಿಗೆ ಅಷ್ಟೊಂದು ಪ್ರೀತಿ ಅವನ ಮೇಲೆ.

ಮೇ ಡೇ ಹುತಾತ್ಮದ ಮಹಾಗಾಥೆ



ಶೀರ್ಷಿಕೆ: ಮೇ ಡೇ ಹುತಾತ್ಮದ ಮಹಾಗಾಥೆ  ಲೇಖಕರು:ವಿಲಿಯಂ ಆಡಲ್ ಮನ್  ಅನುವಾದ:ರಾಹು  ಪುಟಗಳು:278 ಬೆಲೆ:200

ಗಣಿಯಾಳದಲ್ಲಿ ಸಿಕ್ಕಿಹಾಕಿಕೊಂಡ 33 ಕಾರ್ಮಿಕರನ್ನು ಮೇಲಕ್ಕೆತ್ತಿದ ಅಭೂತಪೂರ್ವ ಘಟನೆಯ ದಾಖಲೆ ಕನ್ನಡದಲ್ಲಿ


























ರಾಷ್ಟಪತಿ ಬಂದರೆಂಬ ಸುದ್ಧಿ ಕೇಳಿ ಎಲ್ಲಾ ಕ್ಯಾಮರಾಗಳೂ ಮಾಧ್ಯಮ ಕೇಂದ್ರಕ್ಕೆ ದೌಡಾಯಸಿದವು.
ಅದುವರೆಗೆ ಸುರಕ್ಷಿತವಾಗಿ ಬಚ್ಚಿಟ್ಟಿದ್ದ ಕೆಂಪಕ್ಷರದ ಚೀಟಿ ಆಂಡ್ರೂ ಸುಗಾರೆಯ ಕೈ ದಾಟಿ ಈಗ ಪಿನೆರೊ ಕೈಗೆ ಬಂತು. ಆಳದಿಂದ ಬಂದ ಆ ಪುಟ್ಟ ಸಂದೇಶವನ್ನು ರಾಷ್ಟ್ರಪತಿ ಎತ್ತಿ ಹಿಡಿದು ಕ್ಯಾಮೆರಾಗಳಿಗೆ ಪ್ರದರ್ಶಿಸಿದರು. `ನಾವು 33 ಜನರೂ ಸುರಕ್ಷಿತವಾಗಿದ್ದೇವೆ’ ಎಂಬರ್ಥದ ಬರಹದ `ಲೋಸ್ 33′ (ಈ 33) ಎಂಬ ಪುಟ್ಟ ಪದ ಇಡೀ ಅಮೆರಿಕಾ ಖಂಡದ ಸಹಸ್ರಾರು ಟಿವಿ ಚಾನೆಲ್ ಗಳಲ್ಲಿ, ಪತ್ರಿಕೆಗಳಲ್ಲಿ ತಲೆಬರಹವಾಗಿ ರಾರಾಜಿಸಿತು.
ಅದೇ ವೇಳೆಗೆ ಡ್ರಿಲ್ಲಿಂಗ್ ಯಂತ್ರದ ತಾಂತ್ರಿಕ ಸಿಬ್ಬಂದಿ ಭಾರೀ ಗಾತ್ರದ ತಂತಿ ಸುರುಳಿಯನ್ನು ಹೊತ್ತು ತಂದಿದ್ದರು. ತಂತಿಯ ತುದಿಯಲ್ಲಿ ಒಂದು ಪುಟ್ಟ ಫೋನ್ ಉಪಕರಣವೊಂದನ್ನು ಕಟ್ಟಿ ಮೆಲ್ಲಗೆ ರಂಧ್ರದ ಮೂಲಕ ಇಳಿ ಬಿಟ್ಟರು. `ಸಹಾಯ ಬರಲಿದೆ, ಗಣಿ ಸಚಿವರು ತುಸು ಹೊತ್ತಿನಲ್ಲೇ ಮಾತಾಡಲಿದ್ದಾರೆ. ನಿಮ್ಮಲ್ಲಿ ಯಾರಾದರೊಬ್ಬರು ರಂಧ್ರದ ಬಳಿ ನಿಂತಿರಿ’ ಎಂಬ ಪುಟ್ಟ ಸಂದೇಶದ ಚೀಟಿಯೊಂದನ್ನು ಫೋನ್ ಜತೆ ಕಟ್ಟಿದ್ದರು. ಅದು ಆ ಮುಷ್ಟಿಯಗಲದ ರಂಧ್ರದಲ್ಲಿ ಮೆಲ್ಲಮೆಲ್ಲನೆ ಇಳಿಯುತ್ತ 680 ಮೀಟರ‍್ ಆಳದಲ್ಲಿದ್ದವರನ್ನು ತಲುಪಿತು. ರೆಕಾರ್ಡಿಂಗ್ ವ್ಯವಸ್ಥೆಯನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿದ್ದಾಯಿತು.
ಅರ್ಧ ಗಂಟೆಯಲ್ಲಿ ಪಾತಾಳದಲ್ಲಿ ಫೋನ್ ರಿಂಗಾಯಿತು. ಕಾರ್ಮಿಕ ತಂಡದ ಮುಖ್ಯಸ್ಥ ಲೂಯಿಸ್ ಊರ್ಝುವಾ ಫೋನ್ ಎತ್ತಿಕೊಂಡ.
`ಹೇಗಿದ್ದೀರಾ ಎಲ್ಲ?’ ಸಚಿವರ ಪ್ರಶ್ನೆಗೆ ಕೆಳಿಗಿನಿಂದ ತುಸು ಕ್ಷೀಣವಾದ ಆದರೆ ಸ್ಪಷ್ಟ ಉತ್ತರ ಬಂತು.
`ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆ ಬರುವುದನ್ನೇ ಕಾಯ್ತಾ ಇದ್ದೇವೆ’ ಉರ್ಝುವಾ ಧ್ವನಿ.
ಗೋಲ್ ಬೋರ್ನ್ ಮುಂದಿನ ಮಾತು ಹೇಳುವ ಮೊದಲೇ ಕೆಳಗಿನಿಂದ ಮಾತು ಕೇಳಿಸಿತು:
`ಸರ‍್, ಒಂದು ಕ್ಷಣ ನಿಲ್ಲಿ. ನಾವೆಲ್ಲ ಇಲ್ಲಿ ಒಟ್ಟಾಗಿ ನಿಂತಿದ್ದೇವೆ’.
ತುಸು ಅವಾಕ್ಕಾದ ಗಣಿಸಚಿವರು ಫೋನನ್ನು ಆಚೆ ಕಿವಿಯಿಂದ ಈಚೆ ಕಿವಿಯತ್ತ ತರುತ್ತಲೇ ಕೆಳಗಿನಿಂದ ತೀರ ಪರಿಚಿತ ವೃಂದಗಾನ ಕೇಳಬಂತು -
`ಪ್ಯೂರೊಚಿಲೀ ಎಸ್ತೂಸಿಲೋ ಅಜುವಾಲ್ಡೊ. . .’
ಗೋಲ್ ಬೋರ್ನ್ ಹಠಾತ್ತನೆ ಸೆಟೆದು ನಿಂತರು. ಸಚಿವರ ಸುತ್ತ ನಿಂತವರಿಗೆ ತುಸು ಗಾಬರಿ. ಏನಾಗಿರಬಹುದು?
ಎರಡು ನಿಮಿಷ ಮೌನವಾಗಿ ಸೆಟೆದೇ ನಿಂತಿದ್ದ ಸಚಿವರು,
`ಓ ಎಲ್ ಸಿಲೋ…. ಓ ಎಲ್ ಸಿಲೊ …. ಕೊಂತ್ರಾಲಾ ಒಪ್ರೆಸೆನ್ ….’ ಎಂದು ರಾಗವಾಗಿ ಹೇಳಿದಾಗ ಎಲ್ಲರಿಗೂ ಅರ್ಥವಾಯಿತು.
ಪಾತಾಳದಲ್ಲಿದ್ದ ಎಲ್ಲ 33 ಜನರೂ ಒಟ್ಟಾಗಿ ಚಿಲಿಯ ರಾಷ್ಟಗೀತೆಯನ್ನು ಹಾಡುತ್ತಿದ್ದರು!
ನೆರೆದಿದ್ದವರ ಕಣ್ಣು ಮಂಜಾಗಿತ್ತು.
….
- ಪುಸ್ತಕದೊಳಗಿನಿಂದ (ಪುಟ : 39-40)
ಏಳುನೂರು ಮೀಟರ‍್ ಆಳದಲ್ಲಿ 33 ಗಣಿಗಾರರು ಸಿಕ್ಕಿಹಾಕಿಕೊಂಡಿದ್ದಾರೆ. ಹದಿನೇಳು ದಿನ ಶ್ರಮಿಸಿ 3 ಅಂಗುಲ ಬೋರ‍್ ರಂಧ್ರ ಕೊರೆದು ನೋಡಿದರೆ ಅವರೆಲ್ಲ ಬದುಕಿರುವುದು ಗೊತ್ತಾಗಿದೆ. ಇನ್ನೂ ದೊಡ್ಡ ರಂಧ್ರ ಕೊರೆದು ಅವರನ್ನು ಮೇಲಕ್ಕೆತ್ತಲು ನಾಲ್ಕು ತಿಂಗಳೇ ಬೇಕು. ಅದುವರೆಗೆ ಆ ಮುಷ್ಟಿಗಾತ್ರದ ರಂಧ್ರದ ಮೂಲಕ ಅವರಿಗೆ ಆಹಾರ-ಔಷಧ ರವಾನಿಸಬೇಕು; ಅವರನ್ನು ಮೇಲಕ್ಕೆತ್ತಲು ರಾಕೆಟ್ ಮಾದರಿಯ ಲಿಫ್ಟ್ ನಿರ್ಮಿಸಬೇಕು.,
2010ರ ಅಕ್ಟೋಬರ‍್ ನಲ್ಲಿ ಚಿಲಿ ಎಂಬ ಪುಟ್ಟ ದೇಶ ಎಲ್ಲರನ್ನೂ ಸುರಕ್ಷಿತ ಮೇಲೆತ್ತಿದಾಗ ಆ ಮಹಾಸಾಹಸದ ವೀಕ್ಷಣೆಗೆ 3000 ವರದಿಗಾರರು ಸೇರಿದ್ದರು. ನೂರು ಕೋಟಿಗೂ ಹೆಚ್ಚು ಜನರು ನೇರ ಪ್ರಸಾರದಲ್ಲಿ ಅದನ್ನು ಕಣ್ಣಾರೆ ನೋಡಿದರು. ಸಾಮಾನ್ಯ ಪ್ರಜೆಗಳ ಈ ಅಸಾಮಾನ್ಯ ಸಾಧನೆ `ಮನುಕುಲಕ್ಕೇ ಸ್ಫೂರ್ತಿದಾಯಕ ಸಾಧನೆ’ ಎಂಬ ಶ್ಲಾಘನೆಗೆ ಪಾತ್ರವಾಯಿತು.
ಕಲ್ಪನೆಗೂ ಮೀರಿದ ಈ ನೈಜಕತೆಯನ್ನು ಥ್ರಿಲ್ಲರ‍್ ಶೈಲಿಯಲ್ಲಿ ಬರೆದ ಸರೋಜಾ ಪ್ರಕಾಶ್ ಭೌತವಿಜ್ಞಾನದ ಉಪನ್ಯಾಸಕಿಯಾಗಿದ್ದವರು. ವಿಜ್ಞಾನವನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆಯುವ ಇವರು ಚಿಲಿ ಸಾಹಸದ ಕಥೆಯನ್ನು ಎಲ್ಲರಿಗೂ ಇಷ್ಟವಾಗುವಂತೆ ಬರೆದಿದ್ದಾರೆ. ಈ ಅಪೂರ್ವ ಘಟನೆ ಇಂಗ್ಲೀಷ್ ನಲ್ಲಿ ಕಾದಂಬರಿಯಾಗಿಯೋ, ಸಿನೆಮಾ ಆಗಿಯೋ ಬರುವ ಮೊದಲೇ ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಯಾಗುತ್ತಿದೆ. ಅದು ಹೆಮ್ಮೆಯ ದಾಖಲೆ.
- ನಾಗೇಶ ಹೆಗಡೆ
(ಪುಸ್ತಕದ ಬೆನ್ನುಡಿಯಿಂದ )
ಶೀರ್ಷಿಕೆ: ಚಿಲಿಯ ಕಲಿಗಳು – ಗಣಿ ಪಾತಾಳದಲ್ಲಿ 33 ಜನ 69 ದಿನ ಲೇಖಕರು:ಸರೋಜಾ ಪ್ರಕಾಶ ಪ್ರಕಾಶಕರು: ಭೂಮಿ ಬುಕ್ಸ್ ಪುಟಗಳು:156+8 ಬೆಲೆ:ರೂ.110

ಮಳೆಬಿಲ್ಲ ನೆರಳು- ವಿಜ್ಞಾನ ಲೇಖನಗಳ ಸಂಕಲನ




ಪುಟಗಳು:244, ಬೆಲೆ ರೂ.150-00
ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104

ನೆನಪುಗಳಿಗೇಕೆ ಸಾವಿಲ್ಲ? - ಕಥಾ ಸಂಕಲನ; ಡಾ. ಜೆ.ಬಾಲಕೃಷ್ಣ



ನೆನಪುಗಳಿಗೇಕೆ ಸಾವಿಲ್ಲ? - ಕಥಾ ಸಂಕಲನ; ಡಾ. ಜೆ.ಬಾಲಕೃಷ್ಣ
ಪುಟಗಳು:146; ಬೆಲೆ ರೂ.100-00
ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104
ಇದು ನನ್ನ ಮೊದಲ ಕಥಾ ಸಂಕಲನ. ನಾನು 1983ರಿಂದ ಬರೆದ ಹದಿನಾಲ್ಕು ಕತೆಗಳು ಇಲ್ಲಿವೆ. ಸಾವಿರಾರು ವರ್ಷಗಳ ಹಿಂದೆ ಆದಿಮಾನವ ಮಾಡಿದ ಕೆಲಸವನ್ನೇ ನಾನು ಮಾಡಿದ್ದೇನೆ. ಬಾಲ್ಯದಿಂದ ಇದುವರೆಗಿನ ನನ್ನ ಬದುಕಿನ ಅಲ್ಲೊಂದು ಇಲ್ಲೊಂದು ಎಳೆಯನ್ನು ತೆಗೆದು ಅದಕ್ಕೆ ನನ್ನ ಕಲ್ಪನೆಯ ಮತ್ತೊಂದಷ್ಟು ಎಳೆಗಳನ್ನು ಸೇರಿಸಿ `ಕತೆ ಕಟ್ಟುವ’ ಪ್ರಯತ್ನ ಮಾಡಿದ್ದೇನೆ

ಭಾರತದ ಮೊದಲ ಕಾದಂಬರಿಗಳು: ಮೂಲ ಸಂಪಾದಕರು: ಮೀನಾಕ್ಷಿ ಮುಖರ್ಜಿ



ಕೇಂದ್ರ ಸಾಹಿತ್ಯ ಅಕಾದೆಮಿಯಿಂದ ನಾನು ಅನುವಾದಿಸಿರುವ ‘ಭಾರತದ ಮೊದಲ ಕಾದಂಬರಿಗಳು’ ಇತ್ತೀಚೆಗೆ ಪ್ರಕಟವಾಗಿದೆ. ಅದರ ಪರಿಚಯವನ್ನೂ ಇಲ್ಲಿ ನೀಡಿದ್ದೇನೆ.
ಭಾರತದ ಮೊದಲ ಕಾದಂಬರಿಗಳು: ಮೂಲ ಸಂಪಾದಕರು: ಮೀನಾಕ್ಷಿ ಮುಖರ್ಜಿ
ಕನ್ನಡ ಅನುವಾದ: ಜೆ.ಬಾಲಕೃಷ್ಣ
ಪುಟಗಳು: 21+282; ಬೆಲೆ:ರೂ.175-00
ಪ್ರಕಾಶಕರು: ಸಾಹಿತ್ಯ ಅಕಾದೆಮಿ; ನವದೆಹಲಿ
ಯಾವುದೇ ಸಾಹಿತ್ಯ ಪ್ರಕಾರದ ಪ್ರಾರಂಭ ಮಸುಕು ಮಸುಕಾಗಿರುವಂತೆ ಭಾರತೀಯ ಕಾದಂಬರಿಗಳ ಪ್ರಾರಂಭವೂ ಮಸಕು ಮಸುಕಾಗಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರು ಪರಿಚಯಿಸಿದ ಇಂಗ್ಲಿಷ್ ಶಿಕ್ಷಣದ ನೇರ ಪರಿಣಾಮದಿಂದಾಗಿ ಭಾರತದ ಕಾದಂಬರಿ ಒಂದು ಎರವಲು ಪ್ರಕಾರವೆಂಬ ಅನಿಸಿಕೆ ಬಹಳ ಕಾಲ ಪ್ರಶ್ನಾತೀತವಾಗಿ ಉಳಿದಿತ್ತು. ಆದರೆ ಇಂತಹ ಸಿದ್ಧಾಂತಗಳನ್ನು ಮರುಪರೀಕ್ಷಿಸುವ ಮತ್ತು ಭಾರತದಂತಹ ಬಹುಸಂಸ್ಕೃತಿಯ ಹಾಗೂ
ಬಹು ಭಾಷಾ ಪರಂಪರೆ ಆಯಾ ಚಾರಿತ್ರಿಕ-ಸಾಮಾಜಿಕ ಘಟ್ಟಗಳಲ್ಲಿ ಸಾಹಿತ್ಯದ ಈ ಪ್ರಕಾರದ ಮೇಲೆ ಬೀರಿರುವ ಪರಿಣಾಮಗಳನ್ನು ಈ ಕೃತಿ ಪರಿಶೋಧಿಸುವ ಪ್ರಯತ್ನ ಮಾಡುತ್ತದೆ. ಭಾರತದಲ್ಲಿ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ರಾಷ್ಟ್ರದ ಪರಿಕಲ್ಪನೆಯೊಂದಿಗೇ ಕಾದಂಬರಿ ಪ್ರಕಾರ ಉಗಮವಾಯಿತೆನ್ನುತ್ತಾರೆ ಕೆಲ ಸಾಹಿತ್ಯ ಚರಿತ್ರಕಾರರು. ಈ ಸಂಪುಟವು ಸಾಹಿತ್ಯ ವಿಮರ್ಶಕರು, ಚರಿತ್ರಕಾರರು ಮತ್ತು ರಾಜಕೀಯ ತಾತ್ವಿಕ ಸಿದ್ಧಾಂತಕಾರರು ರಚಿಸಿರುವ ಹದಿನಾಲ್ಕು ಪ್ರಬಂಧಗಳನ್ನು ಒಳಗೊಂಡಿದೆ ಹಾಗೂ ಅವು ವಿವಿಧ ಭಾರತೀಯ ಭಾಷೆಗಳಲ್ಲಿನ ಮೊದಲ ಕಾದಂಬರಿಗಳನ್ನು ಮತ್ತು ಅವು ರಚನೆಗೊಂಡ ಸಂದರ್ಭಗಳನ್ನು ಪರಾಮರ್ಶಿಸುತ್ತದೆ.

ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ …


ಕನ್ನಡದ ಪ್ರಮುಖ ವೈದ್ಯ ಸಾಹಿತಿಗಳಲ್ಲೊಬ್ಬರಾದ ಡಾ.ಹೆಚ್.ಗಿರಿಜಮ್ಮನವರ `ಗರ್ಭಧಾರಣೆ:ಸಂದೇಹ ನಿವಾರಣೆಪುಸ್ತಕ ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ತಿಳುವಳಿಕೆ ಕೊಡುವ ಕೈಪಿಡಿ.

ಒಂದೆಡೆ ಜನಸಂಖ್ಯೆ ನಾಗಾಲೋಟದಲ್ಲಿ ಏರುತ್ತಲೇ ಇದ್ದರೆ, ಮತ್ತೊಂದೆಡೆ ಲೈಂಗಿಕ ವಿಷಯಗಳ ಕುರಿತ ಅಜ್ಞಾನವೂ ಹೆಚ್ಚುತ್ತಿದೆ. ಇಂಥ ಸಂಕೀರ್ಣ ಸಂದರ್ಭದಲ್ಲಿ ಜನಸಾಮಾನ್ಯರಿಗೆ ದಾಂಪತ್ಯ-ಸಾಂಗತ್ಯದ ಕುರಿತು ಸುಲಭ ಭಾಷೆಯಲ್ಲಿ ಅರಿವು ನೀಡುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿರುವ ಗಿರಿಜಮ್ಮನವರ ಈ ಪುಸ್ತಕ ಗರ್ಭಧಾರಣೆ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರೆ ವಿಷಯಗಳನ್ನು ಚರ್ಚಿಸುತ್ತದೆ.

ಗಂಡು ಹೆಣ್ಣಿನ ಸಾಂಗತ್ಯ, ಗರ್ಭ ನಿರೋಧಕಗಳ ಬಳಕೆ, ಗರ್ಭಧಾರಣೆ, ಗರ್ಭಿಣಿ ಸ್ತ್ರೀಯರು ವಹಿಸಬೇಕಾದ ಎಚ್ಚರಿಕೆಗಳು, ಮೂಢನಂಬಿಕೆಗಳು, ಆಹಾರಕ್ರಮ, ಸ್ತನ್ಯಪಾನದ ಮಹತ್ವ, ಹೆರಿಗೆ, ಇತ್ಯಾದಿ ವಿಷಯಗಳ ಕುರಿತ ವಿವರಗಳಿವೆ. ಪ್ರಶ್ನೋತ್ತರಗಳ ಮಾದರಿಯ ನಿರೂಪಣೆ ವಿಷಯವನ್ನು ಓದುಗರಿಗೆ ಸುಲಭವಾಗಿ ಮುಟ್ಟಿಸುವಂತಿದೆ. ರೇಖಾಚಿತ್ರಗಳ ಬಳಕೆ ಪುಸ್ತಕದ ಸೊಗಸನ್ನು ಹೆಚ್ಚಿಸಿದೆ.

ಶೀರ್ಷಿಕೆ : ಗರ್ಭಧಾರಣೆ : ಸಂದೇಹ ನಿವಾರಣೆ ಲೇಖಕರು : ಡಾ. ಹೆಚ್. ಗಿರಿಜಮ್ಮ ಪ್ರಕಾಶಕರು : ವಸಂತ ಪ್ರಕಾಶನ ಪುಟಗಳು :115 ಬೆಲೆ:ರೂ.50/-

ಮಣ್ಣೆ ಕಾವಲು ಶ್ರೀ ಮಣ್ಣೆಮ್ಮ ದೇವಿ: ಶ್ರೀ ಮಣ್ಣೆಮ್ಮ ದೇವಿ ಜಾತ್ರಾ ಮಹೋತ್ಸವ (ದಿನಾಂಕ:೨೫.೦೪.೨೦...

ಮಣ್ಣೆ ಕಾವಲು ಶ್ರೀ ಮಣ್ಣೆಮ್ಮ ದೇವಿ: ಶ್ರೀ ಮಣ್ಣೆಮ್ಮ ದೇವಿ ಜಾತ್ರಾ ಮಹೋತ್ಸವ (ದಿನಾಂಕ:೨೫.೦೪.೨೦...

ಡಾ. ಅಂಬೇಡ್ಕರ್‌ರವರ ಜೀವನ ಮತ್ತು ಹೋರಾಟ

ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅದರ ಭಾಗವಾದ ಅಸ್ಪೃಶ್ಯತೆಯ ಪ್ರಶ್ನೆ ಮತ್ತೆ- ಮತ್ತೆ ಏಳುತ್ತಾ ಬಂದಿದೆ. ಇದರಲ್ಲಿ ಅಡಕವಾಗಿರುವ ಅಸಮಾನತೆ ಮತ್ತು ಶೋಷಣೆಯ ಅಂಶಗಳ ಮೇಲೆ ಚರ್ಚೆಗಳು, ಆಂದೋಲನಗಳು ನಡೆಯುತ್ತ ಬಂದಿವೆ. ಆಧುನಿಕ ಭಾರತದಲ್ಲಿ ಡಾ. ಅಂಬೇಡ್ಕರ್ ಅವರ ನೇತೃತ್ವದ ಹೋರಾಟ ಇಂತವುಗಳಲ್ಲಿ ಪ್ರಮುಖವಾದದ್ದು. ಈ ಅವಿರತ ಹೋರಾಟಗಾರ ದಲಿತ ವಿಭಾಗಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದರು, ಮೇಲ್ಜಾತಿ ಆಪಾಢಭೂತಿತನಗಳನ್ನು ಬಯಲಿಗೆಳೆದರು, ಸ್ವಾತಂತ್ರ್ಯ ಹೋರಾಟ ಕಾಲದಲ್ಲೂ, ನಂತರವೂ ಕಾಂಗ್ರೆಸ್ ಮತ್ತು ಅದರ ನೀತಿಗಳನ್ನು ಬಯಲಿಗೆಳೆದರು. ಆದರೆ ಅಂತಿಮವಾಗಿ ಹಿಂದೂ ಸಮಾಜದ ಅನ್ಯಾಯಗಳಿಂದ ತಪ್ಪಿಸಿಕೊಳ್ಳಲು ಬೌದ್ಧ ಧರ್ಮವನ್ನು ಅಂಗೀಕರಿಸಿ ಎಂದು ತಮ್ಮ ಅನುಯಾಯಿಗಳಿಗೆ ಹೇಳಿದರು. ಇದರಿಂದ ದಲಿತರ ಪರಿಸ್ಥಿತಿ ಬದಲಾಗಲಿಲ್ಲ. ಈಗಲೂ ಒಂದೆಡೆ ಅಂಬೇಡ್ಕರ್‌ರವರನ್ನು ಅಧಿಕೃತವಾಗಿ ಹಾಡಿ ಹೊಗಳಲಾಗುತ್ತಿದೆ, ಅವರ ಹೆಸರನ್ನು ಬಳಸಿಕೊಳ್ಳಲು ಆಳುವ ವರ್ಗಗಳ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ; ಇನ್ನೊಂದೆಡೆ ಸಮಾನತೆಯ ಟೊಳ್ಳು ಹೇಳಿಕೆಗಳು, ಮೀಸಲಾತಿ ಇತ್ಯಾದಿಗಳು ಕೇಳಬರುತ್ತಿವೆಯೇ ಹೊರತು ಬಹುಪಾಲು ದಲಿತರ ಬದುಕಿನ ಬವಣೆಗಳು ಕೊನೆಗಾಣುತ್ತಿಲ್ಲ. ಇದು ಸಮಾನತೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತರ ಮುಂದೆ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.
ಇಂತಹ ಸನ್ನಿವೇಶದಲ್ಲಿ ಡಾ. ಅಂಬೇಡ್ಕರ್‌ರವರ ಜೀವನ ಮತ್ತು ಹೋರಾಟದ ಒಂದು ವಸ್ತುನಿಷ್ಟ ಪರಾಮರ್ಶೆ ಇಂತಹ ಕಾರ್ಯಕರ್ತರಿಗೆ ಮುಂದಿನ ದಾರಿ ತೋರಬಲ್ಲದು. ಅವರ ಕರ್ಮಭೂಮಿಯಾದ ಮಹಾರಾಷ್ಟ್ರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾರ್ಮಿಕ ಮುಂದಾಳು ಪ್ರಭಾಕರ ಸಂಝಗಿರಿಯವರು ಇಂತಹ ಒಂದು ಪರಾಮರ್ಶೆಯನ್ನು ಡಾ.ಅಂಬೇಡ್ಕರ್‌ರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಮಾಡಿದ್ದರು. ಮುಂದೆ ಅದು ಪುಸ್ತಕರೂಪದಲ್ಲಿ ಭಾರತದ ಹಲವು ಭಾಷೆಗಳಲ್ಲಿ ಪ್ರಕಟವಾಯಿತು. ಅದರ ಅನುವಾದ ಈ ಪುಸ್ತಕ.
ಶೀರ್ಷಿಕೆ: ಡಾ. ಬಿ.ಆರ‍್.ಅಂಬೇಡ್ಕರ‍್ – ಜೀವನ ಮತ್ತು ಹೋರಾಟ ಲೇಖಕರು: ಪ್ರಭಾಕರ‍್ ಸಂಝಗಿರಿ ಅನುವಾದ:ಸಬಿತಾ ಶರ್ಮ ಪ್ರಕಾಶಕರು: ಕ್ರಿಯಾ ಪ್ರಕಾಶನ ಪುಟ: 48+4 ಬೆಲೆ:ರೂ.15/-