ಪುಟಗಳು

ಸೂಪರ್ ಚಿಲ್ಲಿ ಆಲೂ ಫ್ರೈ ಮಾಡಿ ಟೇಸ್ಟ್ ನೋಡಿ



Chilly Potatoes Fry
 
ಇನ್ನೇನು 2012ನೇ ವರ್ಷ ಕಾಲಿಡುತ್ತಿದೆ. ಹೊಸ ವರ್ಷಕ್ಕೆ ಮನೆಗೆ ಅಥಿತಿಗಳು ಬಂದಾಗ ಈ ಚಿಲ್ಲಿ ಆಲೂ ಫ್ರೈ ಮಾಡಿದರೆ ಸಖತ್ ರುಚಿಯಾಗಿರುತ್ತೆ. ಅಷ್ಟೇ ಅಲ್ಲ, ಚಳಿಗಾಲದ ಸಂಜೆಯಲ್ಲಿ ಮೆಲ್ಲನೆ ಈ ಖಾದ್ಯವನ್ನು ಸವಿಯುತ್ತಿದ್ದರೆ ಗೊತ್ತೇ ಆಗದಂತೆ ಬಾಯಲ್ಲಿ ಕರಗಿಹೋಗುತ್ತೆ. ಈ ಚಿಲ್ಲಿ ಆಲೂ ಫ್ರೈ ಮಾಡೋದು ಹೇಗೆ ಎಂದು ಇಲ್ಲಿ ತಿಳಿಯಿರಿ.

ಚಿಲ್ಲಿ ಆಲೂ ಫ್ರೈಗೆ ಬೇಕಾಗುವ ಪದಾರ್ಥ:
* 2 ಚಮಚ ಚಿಲ್ಲಿ ಸಾಸ್
* 1 1/2 ಚಮಚ ಸೋಯಾ ಸಾಸ್
* 1 1/2 ಚಮಚ ವಿನೆಗರ್
* 3 ಚಮಚ ಟೊಮೆಟೊ ಕೆಚಪ್
* ಚಿಟಿಕೆ ಅಜಿನೊಮೊಟೊ
* ರುಚಿಗೆ ತಕ್ಕಷ್ಟು ಉಪ್ಪು
* ಮೆಣಸಿನ ಪುಡಿ
* 1/2 ಕೆ.ಜಿ ಚಿಕ್ಕ ಆಲೂಗಡ್ಡೆ
* ಎಣ್ಣೆ
* 2 ಚಮಚ ಕತ್ತರಿಸಿದ ಮೆಣಸಿನಕಾಯಿ
* 2 ಚಮಚ ಬೆಳ್ಳುಳ್ಳಿ
* ಕೊತ್ತಂತರಿ
* ಕೆಂಪು ಮೆಣಸಿನಕಾಯಿ ಪುಡಿ

ಚಿಲ್ಲಿ ಆಲೂ ಫ್ರೈ ಮಾಡುವ ವಿಧಾನ:
* ಒಂದು ಬಟ್ಟಲಿನಲ್ಲಿ ಚಿಲ್ಲಿ ಸಾಸ್, ಸೋಯಾ ಸಾಸ್, ವಿನೆಗರ್, ಟೊಮೆಟೊ ಕೆಚಪ್, ಅಜಿನೊಮೊಟೊ, ಸ್ವಲ್ಪ ಉಪ್ಪು, ಮೆಣಸಿನ ಪುಡಿ, ಆಲೂಗಡ್ಡೆಯನ್ನು ಬಟ್ಟಲಿನಲ್ಲಿ ಸೇರಿಸಿ ಮುಚ್ಚಿ 20 ನಿಮಿಷ ಫ್ರಿಡ್ಜ್ ನಲ್ಲಿಡಬೇಕು.

* ತಳ ಗಟ್ಟಿಯಿರುವ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ, ಉಪ್ಪು, ಕೆಂಪುಮೆಣಸಿನ ಪುಡಿ ಮತ್ತು ಫ್ರಿಡ್ಜ ನಲ್ಲಿಟ್ಟ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ತಿರುಗಿಸಿ ಬೇಯುವವರೆಗೂ ಕಾಯಬೇಕು.

ಈಗ ಚಿಲ್ಲಿ ಆಲೂಗಡ್ಡೆ ಫ್ರೈ ತಿನ್ನಲು ಸಿದ್ಧವಾಗಿರುತ್ತೆ.

ಇದು ಗಾಂಧಿನಗರ ಬೆಚ್ಚಿ ಬೀಳಿಸುವ ಬ್ರೇಕಿಂಗ್ ನ್ಯೂಸ್


Shivanna, Appu & Upendra
 
ಗಾಂಧಿನಗರ ಬೆಚ್ಚಿಬೀಳಿಸುವ ಬ್ರೇಕಿಂಗ್ ನ್ಯೂಸೊಂದು ಹೊರಬಿದ್ದಿದೆ. ಇದು ಗಾಳಿ ಸುದ್ದಿಯಲ್ಲ, ಅಧಿಕೃತವಾಗಿ ಪ್ರಕಟವಾಗಬೇಕಷ್ಟೇ. ಶಿವರಾಜ್ ಕುಮಾರ್ ಚಿತ್ರವೊಂದನ್ನು ಉಪೇಂದ್ರ ನಿರ್ದೇಶಿಸುತ್ತಾರೆ ಎನ್ನುವ ಸುದ್ದಿ ಕಳೆದ ವರ್ಷ ಹರಡಿತ್ತು. ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಒಂದೇ ಚಿತ್ರದಲ್ಲಿ ಈಗ ನಟಿಸಲಿದ್ದಾರೆ. ಚಿತ್ರವನ್ನು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಲಿದ್ದಾರೆ.

2010 ರಲ್ಲಿ ಸಿಂಬಲ್ ಚಿಹ್ನೆಯ ಮೂಲಕ ಸೂಪರ್ ಆಗಿ ಗಿರಿಗಿಟ್ಲೆ ಆಡಿಸಿದ್ದ ಉಪೇಂದ್ರ ತನ್ನಲ್ಲಿರುವ ನಿರ್ದೇಶನದ ಜಾಣ್ಮೆಯನ್ನು ಮತ್ತೊಮ್ಮೆ ಒರೆಗೆ ಹಚ್ಚಲಿದ್ದಾರೆ. ಚಿತ್ರವನ್ನು ರಾಕಲೈನ್ ವೆಂಕಟೇಶ್ ನಿರ್ಮಿಸಲಿದ್ದಾರೆ. ಉಳಿದ ತಂತ್ರಜ್ಞಾನ, ತಾರಾಗಣ ಇನ್ನೂ ಅಂತಿಮವಾಗಿಲ್ಲ.

ಉಪೇಂದ್ರ ಅಭಿನಯದ ಆರಕ್ಷಕ ಚಿತ್ರ ಈ ತಿಂಗಳು ತೆರೆಗೆ ಬರಲಿದೆ. ಗಾಡ್ ಫಾದರ್ ಚಿತ್ರ ಚಿತ್ರೀಕರಣದ ಹಂತದಲ್ಲಿದ್ದು, ಕಲ್ಪನಾ ಚಿತ್ರಕ್ಕೆ ಇದೇ ತಿಂಗಳು ಸಂಕ್ರಾಂತಿಯಂದು ಮಹೂರ್ತ ಫಿಕ್ಸ್ ಆಗಿದೆ. 3ಡಿ ಚಿತ್ರ ಕಠಾರಿ ವೀರ ಸುರಸುಂದರಾಂಗಿ ಇದ್ದಿಷ್ಟು ಸದ್ಯ ಉಪೇಂದ್ರ ಬಳಿ ಇರುವ ಪ್ರಾಜೆಕ್ಟ್ ಗಳು.

2010ರಲ್ಲಿ ಅವರು ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದ ಸೂಪರ್ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಭರ್ಜರಿ ಹಿಟ್ ಆಗಿತ್ತು. ಆ ಚಿತ್ರಕ್ಕೆ ಕೂಡಾ ರಾಕಲೈನ್ ವೆಂಕಟೇಶ್ ಅವರೇ ನಿರ್ಮಾಪಕರಾಗಿದ್ದರು. ಈಗ ಇನ್ನೊಂದು ಮೆಗಾ ಬಜೆಟ್ ಚಿತ್ರಕ್ಕೆ ಅವರು ಕೈಹಾಕಿದ್ದಾರೆ. ಬಾಕ್ಸ್ ಆಫೀಸ್ ಕಿಂಗ್ ಪುನೀತ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಟ್ಟಾಗಿ ನಟಿಸುವುದು ಒಂದು ಕಡೆಯಾದರೆ ಆ ಚಿತ್ರಕ್ಕೆ ಉಪೇಂದ್ರ ನಿರ್ದೇಶನ ಮಾಡುವುದು ಪ್ರೇಕ್ಷಕರ ಪಾಲಿಗೆ ಹಬ್ಬವೋ ಹಬ್ಬ.

ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕ ಕೊಳ್ಳಿರಿ



Kannada Book Fair 2012
 
ಬೆಂಗಳೂರು, ಜ.5: ಕನ್ನಡ ಪುಸ್ತಕ ಪ್ರಾಧಿಕಾರ ಜ.5ರಿಂದ 8ರವರೆಗೆ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಗುರುವಾರ ಬೆಳಗ್ಗೆ 11ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಪುಸ್ತಕ ಮೇಳ ಉದ್ಘಾಟಿಸಿದರು. ಪ್ರಾಧಿಕಾರ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.

ಮೇಳ ನಡೆಯುವ ಪ್ರತಿದಿನ ಬೆಳಗ್ಗೆ 10:30ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ. ರಾಜ್ಯದ 70 ಪ್ರಕಾಶನ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿದ್ದಾರೆ. ಮೇಳದಲ್ಲಿ 68ಕ್ಕೂ ಅಧಿಕ ಮಳಿಗೆ ಇದೆ.

ಎಲ್ಲ ಪ್ರಕಾಶಕರು ಕನಿಷ್ಠ ಶೇ.25ರಷ್ಟು ರಿಯಾಯಿತಿ ನೀಡುವುದು ಕಡ್ಡಾಯ ಎಂದು ನಿಯಮ ಮಾಡಲಾಗಿದೆ. ಕೆಲವು ವಿ.ವಿ.ಗಳ ಪ್ರಸರಾಂಗಗಳು ಮತ್ತು ಸಂಸ್ಥೆಗಳು ಶೇ.50ರಷ್ಟು ರಿಯಾಯಿತಿಯನ್ನು ನೀಡಲು ಮುಂದೆ ಬಂದಿವೆ.

ಕಳೆದ ವರ್ಷ ನಡೆದ ವಿಶೇಷ ರಿಯಾಯಿತಿ ಪುಸ್ತಕ ಮೇಳದಲ್ಲಿ ಒಂದು ಕೋಟಿ ರೂ.ಗಳಿಗೂ ಹೆಚ್ಚಿನ ವ್ಯವಹಾರವಾಗಿದೆ. ಒಟ್ಟು 6 ಪುಸ್ತಕ ಮೇಳಗಳನ್ನು ನಡೆಸಲಾಗಿದೆ ಎಂದು ಸಿದ್ದಲಿಂಗಯ್ಯ ಹೇಳಿದರು.

ಜಾಹೀರಾತು ಮುಕ್ತ ಕನ್ನಡ ಮೂವಿ ಚಾನಲ್ ಪ್ರಾರಂಭ



Sun TV Network Ltd
 
ಈಗಿನ ಟಿವಿ ಚಾನಲ್‌ಗಳಲ್ಲಿ ಊಟಕ್ಕಿಂತ ಉಪ್ಪಿನಕಾಯಿಯೇ ಜಾಸ್ತಿ ಎಂಬಂತೆ ಕಾರ್ಯಕ್ರಮಗಳಿಗಿಂತ ಜಾಹೀರಾತುಗಳ ಅಬ್ಬರವೇ ಜೋರಾಗಿದೆ. ಈ ಕಿರಿಕಿರಿಯಿಂದ ಬೇಸತ್ತಿರುವ ವೀಕ್ಷಕರ ಮನೆ ಪಡಸಾಲೆಗೆ ಮತ್ತೊಂದು ಹೊಸ ಕನ್ನಡ ಟಿವಿ ಬಂದಿದೆ. ಅದೂ ಜಾಹೀರಾತು ರಹಿತ ಆಕ್ಷನ್ ಮೂಮಿ ಚಾನಲ್.

ದಕ್ಷಿಣ ಭಾರತದಲ್ಲಿ ಮುಂಚೂಣಿಯಲ್ಲಿರುವ ಸನ್ ಟಿವಿ ನಾಲ್ಕು ಹೊಸ ಆಕ್ಷನ್ ಮೂವಿ ಚಾನಲ್‌ಗಳನ್ನು ಪ್ರಾರಂಭಿಸಿದೆ. ನಿಮ್ಮ ಮೆಚ್ಚಿನ ಚಲನಚಿತ್ರಗಳನ್ನು ಪ್ರದರ್ಶಿಸುವ ಜೊತೆಗೆ ಜಾಹೀರಾತುಗಳಿಂದ ಮುಕ್ತವಾಗಿರುತ್ತದೆ ಈ ವಾಹಿನಿ.

ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಜಾಹೀರಾತು ಮುಕ್ತ ವಾಹಿನಿಗಳನ್ನು ಪ್ರಾರಂಭಿಸಲಾಗಿದೆ ಎಂದು ಸನ್ ಟಿವಿ ನೆಟ್‌ವರ್ಕ್ ತಿಳಿಸಿದೆ. ಚಲನಚಿತ್ರಗಳಿಗೆಂದೇ ಮೀಸಲಾದ ಈ ವಿಶೇಷ ವಾಹಿನಿ 24 ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ. ಇದೊಂದು ಪ್ರೀಮಿಯರ್ ಪೇ ಚಾನಲ್ ಆಗಿದೆ.

ಹೊಸ ನಾಲ್ಕು ಚಾನಲ್‌ಗಳನ್ನು ಆರಂಭಿಸುವುದರೊಂದಿಗೆ ಸನ್ ಟಿವಿ ನೆಟ್‌ವರ್ಕ್ ಬಳಗಕ್ಕೆ ಒಟ್ಟು 29 ಚಾನಲ್‌ಗಳು ಸೇರ್ಪಡೆಯಾದಂತಾಗಿದೆ. ಕನ್ನಡದಲ್ಲಿ ಏಳು, ತಮಿಳಿನಲ್ಲಿ ಹತ್ತು, ತೆಲುಗಿನಲ್ಲಿ ಎಂಟು ಹಾಗೂ ಮಲಯಾಳಂನಲ್ಲಿ ನಾಲ್ಕು ಟಿವಿ ವಾಹಿನಿಗಳನ್ನು ಸನ್ ನೆಟ್‌ವರ್ಕ್ ಹೊಂದಿದೆ. (ಏಜೆನ್ಸೀಸ್)

ಚಪಾತಿ ಜೊತೆ ಖಾರಾ ಖಾರಾ ಎಗ್ ಫ್ರೈ ಮಸಾಲಾ

Spicy Egg Fry
 
ಖಾರ ಖಾರ ಎಗ್ ಫ್ರೈ ಬ್ರೆಡ್, ಚಪಾತಿ, ದೋಸೆ ಯಾವುದಕ್ಕಾದರೂ ಒಳ್ಳೇ ಕಾಂಬಿನೇಶನ್. ಮೊಟ್ಟೆಗೆ ಮಸಾಲೆ ರುಚಿ ಬೆರೆಸಿ ತಯಾರಿಸುವ ಈ ಎಗ್ ಫ್ರೈ ತಿನ್ನಲು ಸ್ವಾದಭರಿತ. ಎಗ್ ಫ್ರೈ ಮಾಡೋದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿ ನೋಡಿ.

ಎಗ್ ಫ್ರೈಗೆ ಬೇಕಾಗುವ ಪದಾರ್ಥ:
* 2-3 ಮೊಟ್ಟೆ (ಬೇಯಿಸಿ ಸಿಪ್ಪೆ ತೆಗೆದಿರಬೇಕು)
* 1 ಈರುಳ್ಳಿ
* 1 ಟೊಮೆಟೊ
* 3/4 ಚಮಚ ಮೆಣಸು ಮತ್ತು ಜೀರಿಗೆ ಪುಡಿ
* ಪುದೀನಾ, ಕರಿಬೇವು
* 1/2 ಚಮಚ ಕೆಂಪು ಮೆಣಸಿನಕಾಯಿ ಪುಡಿ
* ಎಣ್ಣೆ, ಉಪ್ಪು

ಎಗ್ ಫ್ರೈ ಮಾಡುವ ವಿಧಾನ:
* ಮೊದಲು ಬೇಯಿಸಿದ ಮೊಟ್ಟೆಯನ್ನು ಅರ್ಧ ಭಾಗ ಕತ್ತರಿಸಿಕೊಳ್ಳಬೇಕು.

* ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ, ಕರಿಬೇವು, ಪುದೀನಾ, ಜೀರಿಗೆ ಮೆಣಸಿನ ಪುಡಿಯನ್ನು ಹುರಿದುಕೊಳ್ಳಬೇಕು.

* ನಂತರ ಟೊಮೆಟೊ ಪೇಸ್ಟ್, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಬೆರೆಸಿ ತಿರುಗಿಸಬೇಕು.

* ಈಗ ಎರಡು ಭಾಗವಾಗಿ ಕತ್ತರಿಸಿದ ಮೊಟ್ಟೆಯನ್ನು ಈ ಮಿಶ್ರಣದಲ್ಲಿ ಬೆರೆಸಿ ಸಣ್ಣ ಉರಿಯಲ್ಲಿ ಮಸಾಲೆ ಮೊಟ್ಟೆಯೊಂದಿಗೆ ಬೆರೆಯುವವರೆಗೂ ಬೇಯಿಸಬೇಕು. ಈಗ ಎಗ್ ಫ್ರೈ ಮಸಾಲಾ ತಿನ್ನಲು ರೆಡಿಯಾಗಿದೆ.

2012ರಲ್ಲಿ 5ಲಕ್ಷ ಹೊಸ ಉದ್ಯೋಗ ನೇಮಕಾತಿ

.
Jobs in 2012
 
ಬೆಂಗಳೂರು, ಜ.4: ಉದ್ಯೋಗ ಅರಸುವವರಿಗೆ ಹೊಸ ವರ್ಷದಲ್ಲಿ ವಿಫುಲ ಅವಕಾಶಗಳಿವೆ. 2012ರಲ್ಲಿ ಕನಿಷ್ಠ ಪಕ್ಷ 5 ಲಕ್ಷ ಹೊಸ ನೇಮಕಾತಿಗಳು ನಡೆಯಲಿದೆ ಎಂದು ಉದ್ಯೋಗ ಸಂಸ್ಥೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗ್ಲೋಬಲ್ ಹಂಟ್ ಸಂಸ್ಥೆ ನಿರ್ದೇಶಕ ಸುನೀಲ್ ಗೋಯಲ್ ಅವರ ಪ್ರಕಾರ, 2012ರಲ್ಲಿ ಎರಡು ಪಟ್ಟು ಸಂಬಳ ಏರಿಕೆ ಕೂಡಾ ಕಾಣುವ ಯೋಗ ಇದೆಯಂತೆ.

ಸರ್ಕಾರದ ಔದ್ಯೋಗಿಕ ನೀತಿ ನಿಯಮ ಹಾಗೂ ಮಾರುಕಟ್ಟೆ ಪರಿಸ್ಥಿತಿ ಅವಲೋಕಿಸಿದರೆ, ವಿವಿಧ ಕ್ಷೇತ್ರಗಳಲ್ಲಿ 5 ಲಕ್ಷ ನೇಮಕಾತಿ ಸುಲಭವಾಗಿ ಆಗಲಿದೆ ಎಂದಿದ್ದಾರೆ.

ಯುಎಸ್ ಆರ್ಥಿಕ ಬಿಕ್ಕಟ್ಟು ಹಾಗೂ ಯುರೋ ಆರ್ಥಿಕ ಕುಸಿತ ಸಂದರ್ಭದಲ್ಲಿ ಭಾರತದ ಕಂಪನಿಗಳು ತೋರಿದ ದಿಟ್ಟತನ ಫಲ ನೀಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲಿಕ್ಸಿರ್ ನ ಉಪಾಧ್ಯಕ್ಷೆ ಮೋನಿಕಾ ತ್ರಿಪಾಠಿ ಪ್ರಕಾರ, ಐಟಿ/ಐಟಿಯೇತರ ಸಂಸ್ಥೆಗಳಲ್ಲೇ 3 ಲಕ್ಷಕ್ಕೂ ಅಧಿಕ ನೇಮಕಾತಿ ನಡೆಯಲಿದೆ. ಶೇ.7 ರಿಂದ 8 ಪಟ್ಟು ಹೊಸ ನೇಮಕಾತಿ ಆಗಲಿದೆ.

ಐಟಿ/ಐಟಿಯೇತರ, ಆಸ್ಪತ್ರೆ, ಗ್ರಾಹಕ ಸಂಬಂಧಿ ವೃತ್ತಿ, ರಕ್ಷಣಾ ಇಲಾಖೆ, ರೀಟೇಲ್ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಒದಗಿ ಬರಲಿದೆ.

ನಂತರ ರಿಯಲ್ ಎಸ್ಟೇಟ್, ಆಟೋಮೊಬೈಲ್ ಕ್ಷೇತ್ರ ಕೂಡಾ ಮತ್ತೆ ಉತ್ತುಂಗಕ್ಕೇರಲಿದೆ ಎಂದು ಸಿಂಬಿೋಸಿಸ್ ಸಂಸ್ಥೆ ಸಿಇಒ ವಿನಯ್ ಗ್ರೋವರ್ ಹೇಳುತ್ತಾರೆ.

2011ಕ್ಕೆ ಹೋಲಿಸಿದರೆ ಸಂಬಳ ಏರಿಕೆಯಲ್ಲಿ ಶೇ.11 ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳಿದ್ದಾರೆ.

ಚಿನ್ನದ ಮೇಲೆ ಹಾಲ್‌ಮಾರ್ಕ್ ಹೆಗ್ಗುರುತು ಕಡ್ಡಾಯ


Hallmarking of Gold compulsory
 
ನವದೆಹಲಿ, ಜ. 4 : ಗ್ರಾಹಕರು ನಕಲಿ ಉತ್ಪನ್ನ ಕೊಂಡು ಮೋಸ ಹೋಗುವುದನ್ನು ತಪ್ಪಿಸುವ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಚಿನ್ನದ ಮೇಲೆ ಹಾಲ್‌ಮಾರ್ಕ್ ಹೆಗ್ಗುರುತು ಮೂಡಿಸುವ ಪ್ರಸ್ತಾವನೆಗೆ ಕೇಂದ್ರ ಸರಕಾರ ಬುಧವಾರ ಒಪ್ಪಿಗೆಯ ಮೊಹರನ್ನು ಒತ್ತಿದೆ.

ಈ ನಿಟ್ಟಿನಲ್ಲಿ, ಗ್ರಾಹಕ ವ್ಯವಹಾರ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ದಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (BIS) ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ. ಹಾಲ್‌ಮಾರ್ಕ್ ಚಿನ್ನದ ಪರಿಶುದ್ಧತೆಗೆ ನೀಡುವ ಸರ್ಟಿಫಿಕೇಟ್. ಆದರೆ, ಇದು ಕಡ್ಡಾಯವಾಗಿರಲಿಲ್ಲ.

ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ನೇತೃತ್ವದ ಕೇಂದ್ರ ಸಂಪುಟ ಸಭೆ ದಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (BIS) ಕಾಯ್ದೆಯ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದು, ಬಂಗಾರ ಸೇರಿದಂತೆ ಅನೇಕ ಉತ್ಪನ್ನಗಳ ಮೇಲೆ ಹಾಲ್‌ಮಾರ್ಕ್ ಹೆಗ್ಗುರುತು ಮೂಡಿಸುವುದನ್ನು ಕಡ್ಡಾಯ ಮಾಡಿದೆ.

ಹಾಲ್‌ಮಾರ್ಕ್ ಉತ್ಪನ್ನವಿರುವ ಚಿನ್ನವನ್ನೇ ಕೊಳ್ಳಲು ಗ್ರಾಹಕರು ಇಷ್ಟಪಡುತ್ತಾರೆ. ಹಾಲ್‌ಮಾರ್ಕ್ ಗುರುತು ಇದ್ದರೆ ಉತ್ತಮ ಗುಣಮಟ್ಟದ ಸಂಕೇತ. ಸಿಮೆಂಟ್, ಮಿನರಲ್ ನೀರು, ಹಾಲಿನ ಉತ್ಪನ್ನಗಳು ಸೇರಿದಂತೆ 77 ವಸ್ತುಗಳು ಸರ್ಟಿಫಿಕೇಟ್ ಪಡೆದಿವೆ.

ಅಕ್ರಮ ಮದ್ಯ ಕಂಡ್ರೆ ಅಬಕಾರಿ ಅಧಿಕಾರಿಗೆ ತಿಳಿಸಿ


Illegal foreign liquor seized in Bangalore
 
ಬೆಂಗಳೂರು, ಜ, 4 : ಅಕ್ರಮವಾಗಿ ವಿದೇಶಿ ಮದ್ಯವನ್ನು ಸರಬರಾಜು ಮಾಡುತ್ತಿದ್ದ 2 ಮಾರುತಿ ವಾಹನಗಳನ್ನು ಜಪ್ತುಪಡಿಸಿ, ಇವುಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದ 5 ಲಕ್ಷ ರುಪಾಯಿ ಮೌಲ್ಯದ 72 ಬಾಟಲಿ ವಿದೇಶಿ ಮದ್ಯವನ್ನು ಬೆಂಗಳೂರು ನಗರದ ಅಬಕಾರಿ ಇಲಾಖೆಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಓರ್ವ ವ್ಯಕ್ತಿಯನ್ನು ಸಹ ದಸ್ತಗಿರಿ ಮಾಡಲಾಗಿದೆ. ಈ ದಂಧೆಯನ್ನು ಭೇದಿಸಿದ ಬೆಂಗಳೂರು ನಗರದ ಅಬಕಾರಿ ಉಪ ಆಯುಕ್ತರಾದ ಮೊಹಮದ್ ಫಸೀಯುದ್ದೀನ್ ಇವರ ನೇತೃತ್ವದ ವಿಶೇಷ ತಂಡಗಳನ್ನು ಅಬಕಾರಿ ಆಯುಕ್ತರು ಅಭಿನಂದಿಸಿದ್ದಾರೆ.

ಅಕ್ರಮ ವಿದೇಶಿ ಮದ್ಯ ಸರಬರಾಜು ಜಾಲವನ್ನು ಭೇದಿಸಿರುವ ಅಬಕಾರಿ ಇಲಾಖೆ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶೇಷ ತಂಡಗಳನ್ನು ನೇಮಿಸಿದ್ದು ನಗರದ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಶೋಧನೆ ತೀವ್ರಗೊಳಿಸಿದೆ.

ಕಡಿಮೆ ಬೆಲೆಯಲ್ಲಿ ವಿದೇಶಿ ಮದ್ಯವನ್ನು ಸರಬರಾಜು ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಸಾರ್ವಜನಿಕರು ನಂಬಬಾರದು. ಇಂತಹ ಮದ್ಯ ಸೇವಿಸಿದಲ್ಲಿ ಆರೋಗ್ಯ ಮತ್ತು ಪ್ರಾಣ ಹಾನಿಯಾಗುತ್ತದೆ ಎಂದು ಅಬಕಾರಿ ಆಯುಕ್ತರು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿರುತ್ತಾರೆ. ಇಂತಹ ಚಟುವಟಿಕೆ ಕಂಡುಬಂದಲ್ಲಿ ಸಾರ್ವಜನಿಕರು ಈ ಕೆಳಕಂಡ ಅಧಿಕಾರಿಗಳನ್ನು ಸಹಕರಿಸಲು ಕೋರಲಾಗಿದೆ.

ಕಚೇರಿಯ ಹೆಸರುದೂರವಾಣಿಮೊಬೈಲ್
ಅಬಕಾರಿ ಜಂಟಿ ಆಯುಕ್ತರು, ರಾಜ್ಯ ವಿಚಕ್ಷಣ ದಳ, ಬೆಂಗಳೂರು22278826/2212272294495-97017
ಅಬಕಾರಿ ಜಂಟಿ ಆಯುಕ್ತರು, ಬೆಂಗಳೂರು ವಿಭಾಗ22214242/ 2212051994495-97028
ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ (ಪೂರ್ವ)2223279294495-97228
ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ (ಪಶ್ಚಿಮ)2212504994495-97286
ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ ಉತ್ತರ2212505294495-97007
ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ (ದಕ್ಷಿಣ)22240152/ 2223327894495-97214
ಅಬಕಾರಿ ಉಪ ಆಯುಕ್ತರು, ಬೆಂಗಳೂರು ಗ್ರಾಮಾಂತರ ಜಿಲ್ಲೆ22861343/ 22862279/
22868104
94495-97029