ಪುಟಗಳು

ಸೊಂಡೂರು ಭೂ ಹೋರಾಟ


ಕೋಟ್ಯಂತರ ಬೆಲೆ ಬಾಳುವ ಕಬ್ಬಿಣದ ಅದಿರು, ದಟ್ಟವಾದ ಕಾಡು, ಫಲವತ್ತಾದ ಜಮೀನನ್ನು ಹೊಂದಿದ ಸೊಂಡೂರು ಪ್ರದೇಶದ ಭೂಹೋರಾಟ ವಿಶಿಷ್ಟವಾದುದು. ಯಾಕೆಂದರೆ ಇದು ಒಬ್ಬ ಭೂಮಾಲಿಕನ ವಿರುದ್ಧ ಮಾತ್ರವಲ್ಲ. ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ ಆಗಿತ್ತು. ಸ್ವತಂತ್ರ ಪ್ರಾಂತ್ಯವಾಗಿದ್ದ ಸೊಂಡೂರು ಬ್ರಿಟೀಷರು ಭಾರತ ಬಿಟ್ಟುಕೊಟ್ಟ ಬಳಿಕ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ ಪ್ರಾಂತ್ಯವೂ ಹೌದು. ಸೊಂಡೂರು ರಾಜಮನೆತನ ಕಾಂಗ್ರೇಸ್ ಚಳವಳಿಯನ್ನು ನಿಷೇಧಿಸಿತ್ತು. ಮುಂದೆ ಇದೇ ವಂಶದವರು ಅರಸು ಮಂತ್ರಿ ಮಂಡಲದಲ್ಲಿ ದೀರ್ಘಕಾಲ ಅರ್ಥ ಸಚಿವರೂ ಆಗಿದ್ದರು!
ಕರ್ನಾಟಕದ ಸಮಾಜವಾದಿ ಚಳವಳಿಗಳ ಅಧ್ಯಯನಕ್ಕೆ ಕನ್ನಡ ವಿವಿಯಲ್ಲಿ ಸ್ಥಾಪಿಸಲಾಗಿರುವ ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಅರುಣ್ ಅವರು ಅನೇಕ ಹಳ್ಳಿಗಳನ್ನು ತಿರುಗಾಡಿ, ಹೋರಾಟದಲ್ಲಿ ಪಾಲುಗೊಂಡ ಜನರನ್ನು, ಹಲವು ನಾಯಕರನ್ನು ಭೇಟಿ ಮಾಡಿ ಪೋಲೀಸ್ ಇಲಾಖೆ ದಾಖಲೆಗಳು, ವಿಧಾನಸಭೆಯ ಕಲಾಪಗಳನ್ನು ಪರಿಶೀಲಿಸಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಪ್ರಸಾರಾಂಗ ಪ್ರಕಟಿಸಿದ ಹಲವು ದಪ್ಪ ಗಾತ್ರದ ಪುಸ್ತಕಗಳು ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದವು. ಇಂತಹ ಆರೋಪಗಳಿಗೆ ಈ ಪುಸ್ತಕ ಸ್ವಲ್ಪ ಮಟ್ಟಿಗೆ ಹೊರತಾಗಿದೆ. ಕೆ.ಕೆ.ಮಕಾಳಿಯವರ ಮುಖಪುಟ ವಿನ್ಯಾಸ, ಸರಳ-ಅರ್ಥಪೂರ್ಣವಾಗಿದೆ. ಭಾರಿ ಪ್ರಮಾಣದ ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆಯ ಕೃಷಿಯೇ ಇಂದು ನಾಶವಾಗಿ ಹೋಗಿದೆ. ಪ್ರಸ್ತುತತೆಗಿಂತ ಹೆಚ್ಚಾಗಿ ಹಿಂದೆ ಹೀಗಿತ್ತು ಎಂಬ ಇತಿಹಾಸದ ಅಧ್ಯಯನಕ್ಕೆ ಪುಸ್ತಕ ಸಹಕಾರಿಯಾಗಬಲ್ಲದು.
ಶೀರ್ಷಿಕೆ: ಸೊಂಡೂರು ಭೂ ಹೋರಾಟ ಲೇಖಕರು: ಅರುಣ್ ಜೋಳದ ಕೂಡ್ಲಿಗಿ ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪುಟಗಳು :174 ಬೆಲೆ:ರೂ.80/