ಪುಟಗಳು

ವಸ್ತುನಿಷ್ಟ ವ್ಯಕ್ತಿ ಚಿತ್ರಣ.








































ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯವನ್ನು ತಮ್ಮ ವೈವಿಧ್ಯಮಯ ಬರವಣಿಗೆಗಳಿಂದ ಶ್ರೀಮಂತಗೊಳಿಸಿದವರಲ್ಲಿ ಪಿ.ಲಂಕೇಶ್ ಅವರೂ ಒಬ್ಬರು. ಭಾರತದ ಸಾಹಿತ್ಯ ಅಕಾಡೆಮಿಯು `ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಯಲ್ಲಿ ಲಂಕೇಶ್ ಅವರ ಸಮಗ್ರ ವ್ಯಕ್ತಿತ್ವ ಹಾಗೂ ಬರವಣಿಗೆಯನ್ನು ಕುರಿತು ಪ್ರಕಟಿಸಿದ ಪರಿಚಯ ರೂಪದ ಪುಸ್ತಕ ಇದು. ಲಂಕೇಶ್ ಅವರು ಅಧ್ಯಾಪಕರಾಗಿ, ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ, ಪತ್ರಕರ್ತರಾಗಿ ಕ್ರಿಯಾಶೀಲರಾಗಿದ್ದ ಸುದೀರ್ಘ ಅವಧಿಯಲ್ಲಿ ಅವರ ಒಡನಾಡಿಯಾಗಿದ್ದ ಕೆ.ಮರುಳಸಿದ್ದಪ್ಪ ಅವರು ಈ ಕೃತಿಯನ್ನು ಬರೆದಿದ್ದಾರೆ. ಅತಿ ಪರಿಚಯದಿಂದ ವಸ್ತುನಿಷ್ಠತೆಗೆ ಭಂಗ ಬರಬಹುದೆಂಬ ಆಕ್ಷೇಪಕ್ಕೆ ಆಸ್ಪದವೇ ಇಲ್ಲದಂತೆ ಅವರು ಲಂಕೇಶ್ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಗುಣಗಳನ್ನು ಮಾತ್ರವಲ್ಲದೆ ದೋಷಗಳನ್ನೂ ನಿರ್ದಾಕ್ಷಿಣ್ಯವಾಗಿ ನಮೂದಿಸಿದ್ದಾರೆ. ಆದ್ದರಿಂದಲೇ ಇದು ಲಂಕೇಶ್ ಅವರ ವ್ಯಕ್ತಿತ್ವವನ್ನು ಸರಿಯಾಗಿ ಬಿಚ್ಚಿಡುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಲಂಕೇಶ್ ಅವರ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸೂಕ್ತವಾದ ಪೂರಕ ಹಿನ್ನೆಲೆಯನ್ನು ನೀಡುತ್ತದೆ.
ಪಾಳ್ಯದ ಲಂಕೇಶ್ (1935-2000), ತಮ್ಮ ಸಾಹಿತ್ಯ ಬರಹಗಳಿಂದ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರವನ್ನು ಸಮೃದ್ಧಗೊಳಿಸಿದ ಹಲವು ಪ್ರತಿಭಾವಂತರನ್ನು ನೀಡಿದ ಶಿವಮೊಗ್ಗ ಜಿಲ್ಲೆಯವರು. ಇಂಗ್ಲೀಷ್ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿದ್ದರೂ ಕವನ, ಕತೆ, ನಾಟಕ, ಕಾದಂಬರಿ, ವಿಮರ್ಶೆ, ಸಂಪಾದಿತ ಕೃತಿಗಳ ಮೂಲಕ ಸಾಹಿತ್ಯ ವಲಯಕ್ಕೆ ಪರಿಚಿತರಾದರು. ಬರವಣಿಗೆಗೆ ಮಾತ್ರ ಸೀಮಿತವಾಗದೆ ಚಲನಚಿತ್ರ ನಿರ್ದೇಶನಕ್ಕೂ ಕೈ ಹಾಕಿ ಯಶಸ್ವಿಯಾದರು. ಉಪನ್ಯಾಸ ವೃತ್ತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ವತಂತ್ರವಾಗಿ ತಮ್ಮದೇ ಹೆಸರಿನ ವಾರಪತ್ರಿಕೆಯನ್ನು ಹೊರತಂದು ಅದರಲ್ಲೂ ತಮ್ಮ ಛಾಪನ್ನು ಮೂಡಿಸಿದರು. ಮಹತ್ವದ ಸೃಜನಶೀಲ ಬರಹಗಾರ ಎಂಬಷ್ಟಕ್ಕೆ ಲಂಕೇಶರ ವ್ಯಕ್ತಿತ್ವದ ಚಿತ್ರಣ ಪೂರ್ಣಗೊಳ್ಳುವುದಿಲ್ಲ; ಅವರು ತಮ್ಮ ಪತ್ರಿಕೆಯ ಮೂಲಕ ಒಂದು ಜೀವಂತ ಸಂಸ್ಕೃತಿ ನಿರ್ಮಾಣಕ್ಕಾಗಿ ದುಡಿದವರು. ಕಳೆದ ಶತಮಾನದ ಎಂಬತ್ತರ ದಶಕದಿಂದ ಕನ್ನಡ ನಾಡಿನ ವೈಚಾರಿಕತೆ, ಸಾಮಾಜಿಕ ಬದ್ಧತೆ ಮತ್ತು ಪ್ರಗತಿಪರ ರಾಜಕೀಯ ಚಿಂತನೆಯ ಹಿಂದೆ ಲಂಕೇಶರ ಕೊಡುಗೆ ನಿರ್ವಿವಾದ – ಎಂಬುದನ್ನು ಅವರ ಬರವಣಿಗೆಗಳನ್ನೇ ಆಧರಿಸಿ ಇಲ್ಲಿ ಪ್ರತಿಪಾದಿಸಲಾಗಿದೆ. ಹತ್ತು ಅಧ್ಯಾಯಗಳಿಗೆ ವಿಸ್ತರಿಸಿದ ಈ ಕೃತಿಯಲ್ಲಿ ಲಂಕೇಶರ ವರ್ಣಮಯ ವ್ಯಕ್ತಿತ್ವ ಹಾಗೂ ಬಹುಮುಖ ಪ್ರತಿಭೆಯ ಸಮಗ್ರ ಚಿತ್ರಣವನ್ನು ಮರುಳಸಿದ್ದಪ್ಪನವರು ಸಮರ್ಪಕವಾಗಿ ಕಟ್ಟಿಕೊಟ್ಟಿದ್ದಾರೆ.
ಶೀರ್ಷಿಕೆ: ಪಿ.ಲಂಕೇಶ್ ಲೇಖಕರು: ಕೆ. ಮರುಳಸಿದ್ದಪ್ಪ ಪ್ರಕಾಶಕರು: ಸಾಹಿತ್ಯ ಅಕಾಡಮಿ, ನವದೆಹಲಿ ಪುಟಗಳು:178 ಬೆಲೆ:ರೂ.40/-