ಪುಟಗಳು

ಕನ್ನಡ ಕಲಿಯಲು ಕನ್ನೇಡತರರಿಗೆ ಒಂದು ವರ್ಷ ಗಡುವು

‘Mukhyamantri’ Chandru
ಬೆಂಗಳೂರು, ಜೂನ್ 7: ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರವಾಹದಲ್ಲಿ ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವವರು ಇನ್ನು ಮುಂದೆ ಪ್ರಾಥಮಿಕ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಲಿದೆ. ಇಂತಹ ಪ್ರಸ್ತಾವನೆಯೊಂದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು (KDA) ಸೋಮವಾರ (ಜೂನ್ 6) ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.

ಅಂದರೆ ಕರ್ನಾಟಕಕ್ಕೆ ಬಂದ ಒಂದು ವರ್ಷದೊಳಗಾಗಿ 7ನೇ ತರಗತಿ ಪರೀಕ್ಷೆ ಪಾಸು ಮಾಡುವುದು ಅನಿವಾರ್ಯವಾಗಲಿದೆ. ಈ ಪ್ರಸ್ತಾವನೆಯನ್ನು ಪ್ರಸಕ್ತ ಅಧಿವೇಶನದಲ್ಲೇ ಅಂಗೀಕರಿಸುವಂತೆ ಕೆಡಿಎ ಅಧ್ಯಕ್ಷ, ವಿಧಾನಮಂಡಲ ಸದಸ್ಯ 'ಮುಖ್ಯಮಂತ್ರಿ' ಚಂದ್ರು ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಇದೇ ವೇಳೆ, ಐಟಿ ಉದ್ಯೋಗಿಗಳಿಗೆ ಕನ್ನಡ ಕಲಿಯುವಂತಾಗಲು ಸರಕಾರ ಅಂತರ್ಜಾಲದ ಮೂಲಕ ಕನ್ನಡ ಕಲಿಕೆ ಕೇಂದ್ರಗಳನ್ನು ತೆರೆಯಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

'ರಾಜ್ಯದಲ್ಲಿ ಲಕ್ಷಾಂತರ ಮಂದಿ ಹೊರ ರಾಜ್ಯಗಳಿಂದ ಬಂದು ನೆಲೆ ಕಂಡುಕೊಳ್ಳುತ್ತಿದ್ದಾರೆ. ಇಲ್ಲಿನ ನೆಲ, ಜಲ, ವಾಯು ಮತ್ತಿತರ ಸಂಪನ್ಮೂಲಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳುವಾಗ ಅನಿವಾರ್ಯವಾಗಿ ಮತ್ತು ಕಡ್ಡಾಯವಾಗಿ ಇಲ್ಲಿನ ಸಂಸ್ಕೃತಿ, ಇತಿಹಾಸ ಮತ್ತು ನೆಲದ ಭಾಷೆಯನ್ನು ಅರಿಯಬೇಕು' ಎಂದು 'ಮುಖ್ಯಮಂತ್ರಿ' ಚಂದ್ರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಲು ಸಲಹೆ ನೀಡಿದ್ದೆವೆ. ಇನ್ನೊಂದು ವರ್ಷದಲ್ಲಿ ಕನಿಷ್ಠ 7ನೇ ತರಗತಿಯನ್ನು ಕನ್ನಡದಲ್ಲಿ ಪಾಸು ಮಾಡಿಬಿಡಿ ಎಂದು ಅವರು ಸೂಚಿಸಿದ್ದಾರೆ. ಜತೆಗೆ, ಟೆಲಿಕಾಂ ಸೇವಾ ಕಂಪನಿಗಳು ಮೊಬೈಲ್ ಫೋನ್ ಗಳಲ್ಲಿ ಕನ್ನಡ ಸಾಫ್ಟ್ ವೇರ್ ಬಳಕೆ ಮಾಡುವಂತೆ ನಿರ್ದೇಶಿಸಬೇಕು ಎಂದು ಕೆಡಿಎ ಹೇಳಿದೆ. ಪ್ರಸ್ತಾವನೆಯನ್ನು ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದ್ಯತೆಯ ಮೇರೆಗೆ ಅತಿ ಶೀಘ್ರದಲ್ಲೇ ಸಲಹೆಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.