ಪುಟಗಳು

ಅನಂತ ನಿಧಿ: 'ಬಿ' ಉಗ್ರಾಣ ತೆಗೆಯುವುದು ಅಪಶಕುನ

ತಿರುವನಂತಪುರ, ಜುಲೈ 6: ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಆರನೇ ರಹಸ್ಯ ಉಗ್ರಾಣ ತೆರೆಯುವುದನ್ನು ಮುಂದೂಡಲು ಪುರಾಣ ಪ್ರತೀತಿ, ನಂಬಿಕೆಯೇ ಕಾರಣ ಎಂದು ತಿಳಿದುಬಂದಿದೆ.

ನಂಬಿಕೆಗಳ ಪ್ರಕಾರ 'ಬಿ' ಉಗ್ರಾಣವನ್ನು ತೆರೆಯುವುದು ಅಪಾಯಕಾರಿ. ಈ ಕೊಠಡಿಯ ಪ್ರಧಾನ ಬಾಗಿಲಿನಲ್ಲಿ ಹಾವಿನ ಮಾದರಿಯೊಂದಿದೆ. ಅದನ್ನು ತೆರೆದರೆ ಅಪಶಕುನ ಕಟ್ಟಿಟ್ಟಬುತ್ತಿ ಎನ್ನಲಾಗುತ್ತಿದೆ. ಅಂತೆಯೇ ಈ ಉಗ್ರಾಣದ ತಳದಲ್ಲಿ ರಹಸ್ಯ ಸುರಂಗವಿದ್ದು, ಇದು ನೇರವಾಗಿ ಸಮುದ್ರಕ್ಕೆ ಕರೆದುಕೊಂಡು ಹೋಗುತ್ತದೆ ಎಂಬಿತ್ಯಾದಿ ನಂಬಿಕೆಗಳಿವೆ.

'ಬಿ' ಉಗ್ರಾಣ ತೆರೆಯುವುದರಿಂದ ಅನಾಹುತಗಳಾಗಬಹುದು ಎಂದು ರಾಜಮನೆತನದವರೂ ಈ ಕೊಠಡಿಯನ್ನು ತೆರೆಯುವುದಕ್ಕೆ ಆಕ್ಷೇಪ ಎತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸಮಿತಿ ತಜ್ಞರ ಅಭಿಪ್ರಾಯ ಪಡೆದುಕೊಂಡು ಮುಂದುವರಿಯುವ ತೀರ್ಮಾನಕ್ಕೆ ಬಂದಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ದೇವಸ್ಥಾನದ ನೆಲಮಾಳಿಗೆಯ ಉಗ್ರಾಣಗಳಲ್ಲಿರುವ ಸಂಪತ್ತನ್ನು ಎಣಿಸುತ್ತಿರುವ ಏಳು ಜನರ ಸಮಿತಿ ಏಳನೇ ದಿನವಾದ ಸೋಮವಾರ ಹಠಾತ್‌ ಕಾರ್ಯಸ್ಥಗಿತಗೊಳಿಸಿ ಶುಕ್ರವಾರ 'ಬಿ' ಕೊಠಡಿಯ ಬಾಗಿಲು ತೆರೆಯುವ ಕುರಿತು ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ. ಈಗಾಗಲೇ ತೆರೆದಿರುವ ಐದು ಕೊಠಡಿಗಳಲ್ಲಿರುವ ವಸ್ತುಗಳನ್ನು ಎಣಿಸುವ ಕಾರ್ಯ ಮುಗಿದಿದ್ದು, ಒಂದು ಲಕ್ಷ ಕೋಟಿ ರೂ ಮೇಲ್ಪಟ್ಟು ಸಂಪತ್ತು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ 'ಬಿ' ಉಗ್ರಾಣದಲ್ಲಿ ಎಷ್ಟು ಸಂಪತ್ತು ಇರಬಹುದು ಎಂಬ ಕುತೂಹಲ ಕೆರಳಿರುವಾಗಲೇ ಸಮಿತಿ ಎಣಿಕೆಯ ಕಾರ್ಯವನ್ನು ಅನಿರೀಕ್ಷಿತವಾಗಿ ಮುಂದೂಡಿದೆ.

ಸುಪ್ರೀಂಕೋರ್ಟ್‌ ನೇಮಿಸಿರುವ ಏಳು ಸದಸ್ಯರ ಸಮಿತಿ ಶುಕ್ರವಾರ ಸಮಾಲೋಚಿಸಿ ಮುಂದಿನ ನಡೆಯ ಬಗ್ಗೆ ನಿರ್ದಾರ ಕೈಗೊಳ್ಳಲಿದೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ನಂಬಿಕೆಗಳಿರುವುದರಿಂದ ಸಮಿತಿ ಏಕಪಕ್ಷೀಯವಾಗಿ ವರ್ತಿಸುವುದಿಲ್ಲ. ಅಂತೆಯೇ ಆರನೇ ಉಗ್ರಾಣದ ಬಾಗಿಲು ತೆರೆಯಲು ಕೆಲವೊಂದು ರೀತಿಯ ತಂತ್ರಜ್ಞಾನದ ಅರಿವು ಹೊಂದಿರುವುದು ಕೂಡ ಅಗತ್ಯ ಎಂದು ಸಮಿತಿಯಲ್ಲಿರುವ ನಿವೃತ್ತ ನ್ಯಾಯಾಧೀಶ ಎಂ. ಎನ್‌. ಕೃಷ್ಣನ್‌ ಹೇಳಿದ್ದಾರೆ