ಪುಟಗಳು

ಉಕ್ಕಿನ ಬಾಗಿಲು ಅಡ್ಡ: ಅನಂತ ನಿಧಿ ಪರಿಶೋಧನೆ ಶುಕ್ರವಾರಕ್ಕೆ

ತಿರುವನಂತಪುರಂ, ಜುಲೈ 5: ಇಲ್ಲಿನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ನೆಲಮಾಳಿಗೆಯ ಇನ್ನೂ ಒಂದು ಕೊಠಡಿಯಲ್ಲಿರುವ ನಿಧಿಯ ಪರಿಶೋಧನೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದು, ಶುಕ್ರವಾರ ಮುಂದುವರಿಸಲು ನಿರ್ಧರಿಸಲಾಗಿದೆ. 'ಬಿ' ಕೊಠಡಿಯ ಎರಡು ಮರದ ಬಾಗಿಲುಗಳನ್ನು ತೆರೆಯಲು ಸಾಧ್ಯವಾದರೂ ಪ್ರಾಚೀನ ಕಾಲದ ಉಕ್ಕಿನಿಂದ ಮಾಡಿರುವ ಮೂರನೇ ಬಾಗಿಲಿನ ಬೀಗ ತೆಗೆಯಲು ಸಾಧ್ಯವಾಗದ ಕಾರಣ ವಿಳಂವಾಗಿದೆ.

ಆರು ಕೊಠಡಿಯೊಳಗಿನ ವಸ್ತುಗಳ ಪರಿಶೀಲನೆ ಮೇಲ್ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ಸಮಿತಿಯು ಸೋಮವಾರದವರೆಗೆ ಐದು ಕೊಠಡಿಗಳ ಅವಲೋಕನ ಪೂರ್ಣಗೊಳಿಸಿದೆ. ರಹಸ್ಯ ಕೊಠಡಿ 'ಬಿ' ತೆರೆಯಲು ವಿಶೇಷ ಪರಿಣತಿ ಅಗತ್ಯವಾದ್ದರಿಂದ ಶುಕ್ರವಾರ ಸಭೆ ಸೇರಿ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸಮಿತಿ ನೇತೃತ್ವ ವಹಿಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ಕೃಷ್ಣನ್ ತಿಳಿಸಿದ್ದಾರೆ.

ದೇವಸ್ಥಾನದ ಆಸ್ತಿ ಕಬಳಿಸುವ ಯತ್ನ ನಡೆಯುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಸುಪ್ರೀಂಕೋರ್ಟ್ ನ್ಯಾಯವಾದಿ ಟಿ.ಪಿ. ಸುಂದರರಾಜನ್ ಅವರು ಕೋರ್ಟ್ ಮೊರೆ ಹೋದ ಪರಿಣಾಮ ಪದ್ಮನಾಭಸ್ವಾಮಿ ದೇಗುಲದ ಅನಂತ ಸಂಪತ್ತು ಒಂದೊಂದಾಗಿ ಪತ್ತೆಯಾಗುತ್ತಿದೆ.