ಪುಟಗಳು

ಸಮ್ಮೇಳನದಿ ಚೆನ್ನಮ್ಮ ಬ್ರಿಟಿಷರಿಗೆ ಬರೆದ ಪತ್ರ ಕಾಣಿರಿ

Karnataka Gazetter copy
ಬೆಳಗಾವಿ , ಮಾ.10: ವಿಶ್ವ ಕನ್ನಡ ಸಮ್ಮೇಳನದಲ್ಲಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಏರ್ಪಡಿಸಿರುವ ಐತಿಹಾಸಿಕ ಮಹತ್ವವುಳ್ಳ ದಾಖಲೆಪತ್ರ ವಸ್ತು ಪ್ರದರ್ಶನಕ್ಕೆ ಭಾರಿ ಜನಮನ್ನಣೆ ಸಿಗುತ್ತಿದೆ. ಕಿತ್ತೂರು ರಾಣಿ ಚೆನ್ನಮ್ಮ, ಬ್ರಿಟಿಷ್ ಅಧಿಕಾರಿಗಳು, ಮಹಾತ್ಮ ಗಾಂಧಿ, ಸರ್ ಎಂ ವಿಶ್ವೇಶ್ವರಯ್ಯ ಮುಂತಾದವರು ನಡೆಸಿದ ಪತ್ರಗಳು ಬಳಸಿದ ದಾಖಲೆಗಳ ಅಪೂರ್ವ ಸಂಗ್ರಹವನ್ನು ಒಮ್ಮೆಗೆ ನೋಡುವ ಅವಕಾಶ ಸಾರ್ವಜನಿಕರಿಗೆ ಸಿಕ್ಕಿದೆ.

1973 ರಲ್ಲಿ ಆಸ್ಥಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯು ಐತಿಹಾಸಿಕ ಮಹತ್ವವುಳ್ಳ ದಾಖಲೆಗಳ ಹಾಗೂ ಖಾಸಗಿ ದಾಖಲೆಗಳು ರಾಷ್ಟ್ರದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಳ ಪೂರ್ವಾಪರಗಳನ್ನು ಪ್ರತಿಬಿಂಬಿಸುವ ಮಾಹಿತಿಗಳ ಮೂಲಾಧಾರಗಳನ್ನು ಸಂರಕ್ಷಿಸಿ, ಪ್ರದರ್ಶಿಸುತ್ತಿದೆ. ಇವು ಅಧಿಕೃತವಾದ ದಾಖಲೆಗಳ ಸಂಗ್ರಹಗಾರವಾಗಿ, ಪೂರ್ಣ ಪ್ರಮಾಣದಲ್ಲಿ ನಿರ್ದೇಶನಗಳನ್ನೊಳಗೊಂಡಿದೆ.

ಅಮೂಲ್ಯ ದಾಖಲೆಗಳು :ಬ್ರಿಟೀಷರ ಆಡಳಿತ ಕಾಲದಲ್ಲಿ, ಇಂದಿನ ಬೆಳಗಾವಿಜಿಲ್ಲೆಯು ಬಾಂಬೆ ಸಂಸ್ಥಾನಕ್ಕೆ ಸೇರಿತ್ತು. ಬೆಳಗಾವಿ ಭೂಪಟ 1884, ಕನ್ನಡ ಮೊದಲನೆಯ ಪುಸ್ತಕ - 1915, "ಕರ್ನಾಟಕ ಗ್ರಾಮರ್" ಕನ್ನಡ ಲಿಪಿಯ ಪ್ರಥಮ ಮುದ್ರಣ ಫೋಟೊ ಪ್ರತಿಗಳು (1817) ಬ್ರಿಟೀಷರ ವಿರುದ್ಧ ಹೋರಾಡಿದ ವೀರ ರಾಣಿ ಚೆನ್ನಮ್ಮನಿಗೆ ಸಂಬಂಧಿಸಿದ ಕಾಗದ ಪತ್ರಗಳು, ಬ್ರಿಟೀಷ್ ಆಡಳಿತ ಕಾಲದ ದಾಖಲೆಗಳು, ಮಹಾತ್ಮ ಗಾಂಧಿ, ಸರ್. ಎಂ. ವಿಶ್ವೇಶ್ವರಯ್ಯ, ಮಿಂಟೋ, ಮಿರ್ಜಾ ಇಸ್ಮಾಯಿಲ್, ಪುಟ್ಟಣ್ಣ ಚೆಟ್ಟಿ, ಬೆಳಗಾಂ ಗೆಜೆಟಿಯರ್‌ನಿಂದ ಆಯ್ದ ಭಾಗಗಳು, ಬ್ರಿಟೀಷರ ಕಾಲದಲ್ಲಿ ಕನ್ನಡದ ಬಳಕೆ ಕುರಿತಾದ ದಾಖಲೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರಗಳು, ಮುಂತಾದವುಗಳನ್ನು ಒಳಗೊಂಡಿದೆ.

ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂ ಬಿ-1ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಾಗಾರ ಇಲಾಖೆಯ ಈ ಸಂಗ್ರಹ ವಿದ್ವಾಂಸರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಆಕರಗಳಾಗಿ ಹಾಗೂ ಸಂಶೋಧನೆಗಳಿಗಾಗಿ ಉಪಯೋಗವಾಗುವಂತೆ ಸರ್ಕಾರದ ಪರವಾಗಿ ನಿರ್ವಹಣೆ ಮತ್ತು ಸಂರಕ್ಷಣೆ ಮಾಡಿಕೊಂಡು ಬರಲಾಗಿದೆ. ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋದವರೆ ಈ ಅಮೂಲ್ಯ ದಾಖಲೆಗಳ ಸಂಗ್ರಹವನ್ನು ನೋಡಲು ಮರೆಯಬೇಡಿ