ಪುಟಗಳು

ದಲಿತ ವಿರೋಧಿ ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ!

ಉಡುಪಿ ಜೂ 12: ದಲಿತರು ಕ್ರೈಸ್ತ , ಇಸ್ಲಾಂ ಧರ್ಮಗಳಿಗೆ ಮತಾಂತರವಾಗಬೇಡಿ.ಬೌದ್ಧ ಧರ್ಮ ಸ್ವೀಕರಿಸಿದರೂ ಅ ಧರ್ಮದಲ್ಲೂ ದಲಿತರು ಅಸ್ಪೃಶ್ಯತೆಯಿಂದ ಹೊರ ಬರಲಾರಿರಿ. ಮತಾಂತರದ ನಾಟಕ ಬೇಡ ಎಂದು ಇತ್ತೀಚೆಗೆ ನಡೆದ ಬೌದ್ಧ ಧರ್ಮ ದೀಕ್ಷಾ ಕಾರ್ಯಕ್ರಮದ ಬಗ್ಗೆ ಪೇಜಾವರಶ್ರೀಗಳು ನೀಡಿದ್ದ ಹೇಳಿಕೆ ಅವರಿಗೆ ಮುಳುವಾಗಿ ಪರಿಣಮಿಸಿದೆ. ಶ್ರೀಗಳು ಅನ್ಯ ಮತ ಬದಲು ಹಿಂದೂಗಳೇ ಉಳಿಯಿರಿ ಎಂದು ನೀಡಿದ ಆಫರ್ ಅನ್ನು ತಿರಸ್ಕರಿಸಿರುವ ದಲಿತರು, ಜೂ 13ರಂದು ಶ್ರೀಗಳ ಹೇಳಿಕೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.


ಪೇಜಾವರ ಶ್ರೀಗಳ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಅವರ ದಲಿತ ವಿರೋಧಿ ನೀತಿಯನ್ನು ಖಂಡಿಸುತ್ತೇವೆ. ಜಾತಿ ಮತ್ತು ಅಸ್ಪಶ್ಯತೆ ಹಿಂದೂ ಧರ್ಮದ ಆತ್ಮ ಇದ್ದಂತೆ. ಜಾತಿ ನಾಶ ಮಾಡುವುದು ಎಂದರೆ ಹಿಂದೂ ಧರ್ಮವನ್ನು ನಾಶ ಮಾಡಿದಂತೆ. ದಲಿತರು ಬೌದ್ಧ ಧರ್ಮ ಸ್ವೀಕರಿಸುವುದರಿಂದ ಅಸ್ಪಶೃತೆ ನಾಶವಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೂವಪ್ಪ ಮಾಸ್ತರ್ ತಿಳಿಸಿದ್ದಾರೆ.

‘ಜಾತಿ ಮತ್ತು ಅಸ್ಪಶ್ಯತೆ ಹಿಂದೂ ಧರ್ಮದ ಅವಿಭಾಜ್ಯ ಅಂಗ’ ಎಂದು ಹೇಳಿರುವ ಪೇಜಾವರ ಶ್ರೀ ವಿಶ್ವೇಶತೀರ್ಥರ ಹೇಳಿಕೆ ಅಸ್ಪೃಶ್ಯತೆಯನ್ನು ಬೆಂಬಲಿಸುತ್ತಿದ್ದು, ಅವರನ್ನು ಅಸ್ಪಶ್ಯತಾ ಕಾಯ್ದೆಯಡಿಯಲ್ಲಿ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಸ್ತರ್ ಹೇಳಿದರು