ಪುಟಗಳು

ನೂತನ ಮುಖ್ಯಮಂತ್ರಿಯಾಗಿ ಸದಾನಂದ ಗೌಡ ಆಯ್ಕೆ

ಬೆಂಗಳೂರು, ಆಗಸ್ಟ್ 03: ತೀವ್ರ ಹೊಡೆದಾಟ, ಮಾರಾಮಾರಿ ಮಧ್ಯೆ ಬಿಜೆಪಿಯ ಹಿರಿಯ ನಾಯಕ ಡಿ.ವಿ. ಸದಾನಂದ ಗೌಡ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸೋತ ಅಭ್ಯರ್ಥಿ ಜಗದೀಶ್ ಶೆಟ್ಟರ್ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಸದಾನಂದ ಗೌಡ ಪರ 62 -  ಜಗದೀಶ್ ಶೆಟ್ಟರ್ ಪರ 55

ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಬುಧವಾರ ಮಧ್ಯಾಹ್ನ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ರಹಸ್ಯ ಮತದಾನದ ಮೂಲಕ ಡಿವಿಎಸ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡರು. ಸದಾನಂದ ಗೌಡ ಆಯ್ಕೆ ಮೂಲಕ ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದಂತಾಗಿದೆ. ಯಡಿಯೂರಪ್ಪ ಸಹ ಮತ ಚಲಾಯಿಸಿದರು.

ಒಂದು ಹಂತದಲ್ಲಿ ಸಭೆ ವಿಕೋಪಕ್ಕೆ ತಿರುಗಿದ್ದನ್ನು ಸೂಕ್ಷ್ಮವಾಗಿ ಅವಲೋಕಿಸಿದ ಇಬ್ಬರೂ ವೀಕ್ಷಕರಾದ ಅರುಣ್ ಜೇಟ್ಲಿ ಮತ್ತು ರಾಜನಾಥ ಸಿಂಗ್ ಅವರು ಮುಖ್ಯಮಂತ್ರಿಗಾದಿಗಾಗಿ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ಹೆಸರುಗಳನ್ನು ಆಖೈರುಗೊಳಿಸಿ, ರಹಸ್ಯ ಮತದಾನಕ್ಕೆ ಆದೇಶಿಸಿದ್ದರು.

ಸಭೆಯಲ್ಲಿ ಒಟ್ಟು 117 ಶಾಸಕರು ಮತ ಚಲಾಯಿಸಿದರು. ಸಭೆಗೆ ಆಗಮಿಸಿದ್ದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಮತ್ತು ಆಂಗ್ಲೊ ಇಂಡಿಯನ್ ನಾಮಕರಣ ಸದಸ್ಯ ಡೆರಿಕ್ ಅವರಿಗೆ ಮತದಾನಕ್ಕೆ ಅವಕಾಶ ನಿರಾಕರಿಸಲಾಯಿತು. ಅದಕ್ಕೂ ಮುನ್ನ ಸಭೆಗೆ ಬಂದಿದ್ದ ಸಂಸದರು ಮತ್ತು ಮೇಲ್ಮನೆ ಸದಸ್ಯರನ್ನು ಮತದಾನ ಸ್ಥಳದಿಂದ ಹೊರ ಕಳಿಸಿ, ಬ್ಯಾಲೆಟ್ ಪೇಪರ್ ಮೂಲಕ ಗುಪ್ತ ಮತದಾನಕ್ಕೆ ಅನುವು ಮಾಡಿಕೊಡಲಾಯಿತು