ಪುಟಗಳು

ಸೃಷ್ಟಿಯೋ ವಿಕಾಸವೋ


1859ರ ನವಂಬರ‍್ನಲ್ಲಿ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ `ಜೀವ ಸಂಕುಲಗಳ ಉಗಮ’ ಎಂಬ ಸಂಶೋಧನಾ ಗ್ರಂಥ ಬಿಡುಗಡೆಯಾಯಿತು. ಇದರ ಎಲ್ಲಾ 1250 ಪ್ರತಿಗಳು ಮೊದಲನೇ ದಿನವೇ ಖರ್ಚಾದುವಂತೆ. ಮುಂದೆ ಮಾನವ ಜ್ಞಾನ ಭಂಡಾರಕ್ಕೆ ಅಮೂಲ್ಯವಾದ ಕೊಡುಗೆ ಎಂದೆನಿಸಿಕೊಂಡ ಈ ಗ್ರಂಥ ಅಂದು ಇಡೀ ಯುರೋಪ್ ದೇಶವನ್ನು ತಲ್ಲಣಗೊಳಿಸಿತು. ಈ ಜಗತ್ತು ಒಂದು ಪರಮ ಶಕ್ತಿಯ ಸೃಷ್ಟಿ ಎಂಬ ಸೃಷ್ಟಿವಾದದ ಪರವಾಗಿ ಮತ್ತು ವಿರುದ್ಧವಾಗಿ ನಡೆದುಕೊಂಡು ಬಂದಿರುವ ವಾದ-ವಿವಾದಗಳ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಘಟನೆಯಾಗಿತ್ತು.
ಸೃಷ್ಟಿವಾದ ಕೇವಲ ಒಂದು ಬೌದ್ಧಿಕ ಚರ್ಚೆಯ ವಿಷಯವಾಗಿರಲಿಲ್ಲ. ಈ ಜಗತ್ತು ಸೃಷ್ಟಿಕರ್ತನ ನಿಯಮದಂತೆ ನಡೆಯುತ್ತಿದೆ. ಎಲ್ಲವೂ ಅವನ ಇಚ್ಛೆ ಮತ್ತು ಅವನ ಲೀಲೆ ಎನ್ನುತ್ತಾರೆ ಸೃಷ್ಟಿವಾದಿಗಳು. ಇದು ನಿಜವೇ? ಇದಕ್ಕೆ ಒಬ್ಬ ಸೃಷ್ಟಿಕರ್ತ ಇದ್ದಾನೆಯೇ? ಈ ಪ್ರಕೃತಿ, ಇದರಲ್ಲಿನ ಸಕಲ ಜೀವರಾಶಿಗಳು ಆ ಸೃಷ್ಟಿಕರ್ತನ ಸೃಷ್ಟಿಯೇ? ಅಸಮಾನತೆ, ಶೋಷಣೆ ಇವೂ ಆ ಸೃಷ್ಟಿಕರ್ತನ ಸೃಷ್ಟಿಯೇ?
ಈ ಕಿರುಹೊತ್ತಿಗೆಯನ್ನು ಬರೆದಿರುವ ಜಿ.ವಿ.ಶ್ರೀರಾಮರೆಡ್ಡಿಯವರು ಹೇಳುವಂತೆ “ಆವತ್ತಿನಿಂದ ಇವತ್ತಿನವರೆಗೂ ತುಳಿತಕ್ಕೆ, ಶೋಷಣೆಗೆ ಒಳಗಾದವರನ್ನು ಕೇಳಿದರೆ, ಇದು ನಮ್ಮ ಕರ್ಮ, ಹಿಂದಿನ ಜನ್ಮದ ಪಾಪದ ಫಲ, ದೇವರು ನಮ್ಮನ್ನು ಹೀಗೇ ಇಟ್ಟಿದ್ದಾನೆ. ನಮ್ಮ ಹಣೆಬರಹ, ದೇವರು ಹೇಗೆ ಇಟ್ಟಿದ್ದಾನೋ ಹಾಗೆ ಇದ್ದೇವೆ ಎಂದೇ ಹೇಳುತ್ತಿದ್ದರು, ಹೇಳುತ್ತಿದ್ದಾರೆ. ಇನ್ನು ಶೋಷಕರು, ಅವರದ್ದೂ ಇದೇ ವಾದ ಮತ್ತು ಅವರು ಅದನ್ನು ಸಮರ್ಥಿಸುತ್ತಾರೆ. ಹಾಗಾದರೆ ಇದು ನಿಜವೆಂದು ನಂಬಬೇಕೇ?” ಇವು ಸಮಾನತೆಯ ಸಮಾಜದ ನಿರ್ಮಾಣದ ಕನಸು ಕಾಣುವ ಎಲ್ಲರನ್ನೂ ಕಾಡುತ್ತಾ ಬಂದಿರುವ ಪ್ರಶ್ನೆಗಳು.
ಶ್ರೀ ರಾಮರೆಡ್ಡಿಯವರು ಈ ಕಿರು ಹೊತ್ತಿಗೆಯಲ್ಲಿ ಈ ಪ್ರಶ್ನೆಗಳಿಗೆ ತಮ್ಮ ಹೋರಾಟಗಳ ಅನುಭವ ಮತ್ತು ಅಧ್ಯಯನದ ಆಧಾರದಲ್ಲಿ ಉತ್ತರಗಳನ್ನು ಕಾಣಲು ಪ್ರಯತ್ನಿಸಿದ್ದಾರೆ.
2009ರಲ್ಲಿ ಚಾರ್ಲ್ಸ್ ಡಾರ್ವಿನ್ನರ ಅಮೂಲ್ಯ ಕೃತಿಯ 150ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಇದು ಅವರ ಜನ್ಮ ದ್ವಿಶತಮಾನೋತ್ಸವದ ವರ್ಷ ಕೂಡಾ. ಕ್ರಿಯಾ ಪ್ರಕಾಶನ ಈ ಪ್ರಕಟಣೆಯ ಮೂಲಕ ಇದರಲ್ಲಿ ಭಾಗಿಯಾಗುತ್ತಿದೆ.
- ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: ಸೃಷ್ಟಿಯೋ ವಿಕಾಸವೋ ಲೇಖಕರು: ಜಿ.ವಿ.ಶ್ರೀರಾಮರೆಡ್ಡಿ ಪ್ರಕಾಶಕರು: ಕ್ರಿಯಾ ಪ್ರಕಾಶನ ಪುಟ:68 ಬೆಲೆ:ರೂ.30/-

ಜೀವ ಹೇಗೆ ಹುಟ್ಟಿದರೇನಂತೆ?


ಜೀವದ ಹುಟ್ಟಿನ ನಿಜಸ್ಥಿತಿಯನ್ನು ವಿವರಿಸಿ, ನಿಮಗೆ ತಾಜಾ ಮಾಹಿತಿಯನ್ನೊದಗಿಸುತ್ತದೆ ಈ ಕಿರು ಪುಸ್ತಕ. ಸರಳವಾದ ಭಾಷೆ, ಕುತೂಹಲ ಕೆರಳಿಸುವ ಘಟನೆಗಳು ಹಾಗೂ ಸನ್ನಿವೇಶಗಳು, ನಿಮ್ಮ ಚಿಂತನೆಯನ್ನು ಕೆದಕುವಂತಹ ಮಂಡನೆ, ರೋಮಾಂಚಕಾರೀ ವೈಜ್ಞಾನಿಕ ಪತ್ತೇದಾರಿಯ ಸ್ವಾರಸ್ಯಮಯ ನಿರೂಪಣೆ, ವಿಜ್ಞಾನಿಗಳು ಅನುಭವಿಸಿದ ಕಷ್ಟ ನಷ್ಟಗಳು, ಅವರು ಪಟ್ಟ ಅವಮಾನ, ಅವರು ಎದುರಿಸಿದ ಘೋರ ಘರ್ಷಣೆಗಳು, ಕಾಲಾನುಕಾಲಕ್ಕೆ ಹೇಗೆ ಹೊಸ ಹೊಸ ವಿಜ್ಞಾನಿಗಳು ಅವತರಿಸಿ, ಕೆಚ್ಚಿನಿಂದ, ಕಿಚ್ಚಿನಿಂದ, ಈ ಚಕ್ರವ್ಯೂಹವನ್ನು ಭೇದಿಸಿ, ಮುನ್ನುಗ್ಗಿ, ಮೂಡನಂಬಿಕೆಗಳನ್ನು ಸಾರಾಸಗಟಾಗಿ ತರಿದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು ಎಂಬುದೇ ಈ ಪತ್ತೇದಾರಿ ಕಾದಂಬರಿಯ ಸಾರಾಂಶ.
ಹದಿನೈದು ಹರೆಯದ ಕಿಶೋರರಿಂದ ವಯೋವೃದ್ಧರವರೆಗೆ, ಎಲ್ಲರೂ ಓದಿ, ಖುಷಿ ಪಡಬಹುದಾದ, ಸಾಮಾನ್ಯ ಜ್ಞಾನ ಹೆಚ್ಚಿಸುವ, ಅಜ್ಞಾನವನ್ನು ಅಳಿಸುವ ವೈಜ್ಞಾನಿಕ ಕಾದಂಬರಿ ಇದು. ಓದಿದಷ್ಟೂ, ಮುಂದೇನಾಯಿತು ಎಂದು ತಿಳಿಯುವ ಕಾತರ, ಇನ್ನೂ ಓದಬೇಕೆಂಬ ಆತುರ, ಇವೇ ಈ ಪುಸ್ತಕದ ಕೆಲವು ವೈಶಿಷ್ಟ್ಯಗಳು.
-ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: ಜೀವ ಹೇಗೆ ಹುಟ್ಟಿದರೇನಂತೆ? ಲೇಖಕರು:ಪ್ರೊ. ಎಂ.ಜೆ.ಸುಂದರ‍್ ರಾಮ್ ಪ್ರಕಾಶಕರು:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪುಟ:108 ಬೆಲೆ:ರೂ.೪೦/-

ಹಿಂದುತ್ವ ಮತ್ತು ದಲಿತರು


ಮಹಿಳಾ ದಿನಾಚರಣೆಯ ಶತಮಾನೋತ್ಸವದ ಶುಭಾಶಯಗಳು




ಸ್ತ್ರೀಮತವನುತ್ತರಿಸಲಾಗದೆ?


ನಾನು ಓದಿ ಮೆಚ್ಚಿದ ಕೃತಿಗಳನ್ನು, ಈ ದಿನಗಳಲ್ಲಿ, ಮತ್ತೆ ಓದುವಂತೆ ಮಾಡುತ್ತಿರುವ ಕನ್ನಡದ ಮುಖ್ಯ ವಿಮರ್ಶಕರಲ್ಲಿ ಡಾ. ಆಶಾದೇವಿ ಒಬ್ಬರು. ಒಬ್ಬರು ಮಾತ್ರವಲ್ಲ ಅನನ್ಯರು. ಸಾಹಿತ್ಯದ ವಿಷಯದಲ್ಲಿ ಇವರದು ಸ್ತ್ರೀ ದೃಷ್ಟಿಕೋನ ಎಂದು ಮೆಚ್ಚಿ ಮರೆಯುವಂತಿಲ್ಲ. ಯಾಕೆಂದರೆ ನನ್ನದೂ ಆಗಬೇಕಿದ್ದ ಒಳನೋಟಗಳನ್ನು ಆಶಾದೇವಿ ನನಗೆ ಒದಗಿಸಿದ್ದಾರೆ. ವೈದೇಹಿ ಕೃತಿಗಳ ಬಗ್ಗೆ, ಕುಮಾರವ್ಯಾಸನ ಬಗ್ಗೆ,
ಬಸವಣ್ಣನ ಬಗ್ಗೆ ಹೀಗೇ ಹಲವು ಈಚಿನ-ಹಿಂದಿನ ಲೇಖಕರ ಬಗ್ಗೆ ನಮ್ಮನ್ನು ಕೆಣಕುವಂತೆ, ಒಪ್ಪುವಂತೆ, ಅನುಮಾನಿಸುವಂತೆ ವಿಮರ್ಶೆಯ ವಿನಯದಲ್ಲಿ ಆಶಾದೇವಿ ಬರೆಯುತ್ತಾರೆ.
ಎಲ್ಲಾ ಕೃತಿಗಳಲ್ಲೂ ಇರುವ ವಾಚ್ಯಾರ್ಥಗಳು ನಿವೃತ್ತವಾಗಿ ನಮಗವು ಧ್ವನಿಸುತ್ತವೆ ಎಂದು ಸುಲಭವಾಗಿ ನಾವು ತಿಳಿದಿರುತ್ತೇವೆ. ಆಶಾದೇವಿಯವರು ಕೃತಿಯ ಈ ವಾಚ್ಯದ ಮುಖವನ್ನು ನೋಡುತ್ತಾರೆ; ಆದರೆ ಈ ವಾಚ್ಯ ಮಾತ್ರ ಮುಖ್ಯವೆನ್ನುವಂತೆ ನೋಡುವುದಿಲ್ಲ. ಕೃತಿಯಿಂದ ಹುಟ್ಟಿದ ರಸಾನುಭವವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತ – ಸಂಭ್ರಮಿಸದಂತೆ ಅನುಮಾನಿಸುತ್ತ ಪ್ರಶ್ನಿಸುತ್ತ – ನೋಡುತ್ತಾರೆ. ಇದು ಕಷ್ಟದ ಸಾಹಸದ ಓದು; ಕೃತಿ ಪೂರ್ಣವಾಗಿ ನಮಗೆ ಒದಗುವಂತೆ ಮಾಡುವ ಓದು ಇದು. ಪ್ರಾಮಾಣಿಕತೆ, ಧೀಮಂತಿಕೆಗಳ ಜೊತೆ ಕೃತಿಗೆ ಎದುರಾಗುವ ಧೈರ್ಯವೂ ಈ ಬಗೆಯ ವಿಮರ್ಶೆಗೆ ಅಗತ್ಯ.
ಈ ದಿನಗಳಲ್ಲಿ ಕನ್ನಡ ಸಾಹಿತ್ಯ ಜೀವಂತವಾಗಿದೆ ಎನ್ನಿಸುವಂತೆ ಮಾಡಿರುವ ಆಶಾದೇವಿಗೆ ನಾವು ಕೃತಜ್ಞರು. ವಿಲಕ್ಷಣ ಪ್ರತಿಭೆಯ ನನ್ನ ಗೆಳೆಯ ಡಿ. ಆರ‍್. ನಾಗರಾಜ್ ರ ಹಾದಿಯಲ್ಲಿ ಕನ್ನಡ ಸಾಹಿತ್ಯದ ಅನುಭವವನ್ನು ಆಶಾದೇವಿ ವಿಸ್ತರಿಸುತ್ತಿದ್ದಾರೆ. ಆ ಕ್ರಮವನ್ನು ನಾವು ನಮ್ಮ ಆತ್ಮೀಯ ಓದಿನಲ್ಲಿ ಎದುರಾಗುವಂತೆ ಮಾಡುವ ಬರವಣಿಗೆ ಇಲ್ಲಿದೆ.
- ಯು. ಆರ‍್. ಅನಂತಮೂರ್ತಿ
-ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: ಸ್ತ್ರೀಮತವನುತ್ತರಿಸಲಾಗದೆ? ಲೇಖಕರು: ಎಂ.ಎಸ್. ಆಶಾದೇವಿ ಪ್ರಕಾಶಕರು: ಅಕ್ಷರ ಪ್ರಕಾಶನ ಪುಟ:144 ಬೆಲೆ: ರೂ.90/-

ನಟನೆಯ ಪಾಠಗಳು