ಪುಟಗಳು

ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಮಾಕಳಿ ಬೆಟ್ಟ - ಪ್ರಜಾವಾಣಿ ವಾರ್ತೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಪ್ರಸಿದ್ಧ ಬೆಟ್ಟಗಳಲ್ಲಿ ಒಂದಾಗಿರುವ ಮಾಕಳಿ ದುರ್ಗ ಅಥವಾ ದೊಡ್ಡಬೆಟ್ಟ ಶಿವನ ಭಕ್ತರಿಗೆ ಹಾಗೂ ಚಾರಣ ಪ್ರಿಯರಿಗೆ ಅಚ್ಚು ಮೆಚ್ಚಿನ ತಾಣವಾಗಿದೆ. ಸಾಸಲು ಹೋಬಳಿಯ ಗುಂಡಮಗೆರೆ ಸಮೀಪದಲ್ಲಿರುವ ಈ ಮಾಕಳಿ ಬೆಟ್ಟ ಹತ್ತಲು ಯಾವುದೇ ಮೆಟ್ಟಿಲುಗಳ ಸೌಲಭ್ಯ ಇಲ್ಲ.

ಸುಮಾರು 2.5 ಕಿ.ಮೀ ಎತ್ತರದ ಬೆಟ್ಟವನ್ನು ಒಂದೂವರೆ ಗಂಟೆ ಸಮಯದಲ್ಲಿ ಹತ್ತ ಬಹುದಾಗಿದೆ. ಅಷ್ಟೇನು ಕಡಿದಾಗಿಲ್ಲ. ಗುಂಡಮಗೆರೆ ಗ್ರಾಮದ ಕಡೆಯಿಂದ ಹತ್ತಲು ಒಂದಿಷ್ಟು ಸುಲಭವಾದ ಕಾಲು ಮಾರ್ಗ ಇದೆ.
ಬೆಟ್ಟಕ್ಕೆ ಹತ್ತುವಾಗ ನವಿಲು, ನರಿ, ಕಾಡು ಕೋಳಿ, ಮೊಲ ಸೇರಿದಂತೆ ಸಣ್ಣಪುಟ್ಟ ಕಾಡು ಪ್ರಾಣಿಗಳು ಕಣ್ಣಿಗೆ ಬೀಳುತ್ತವೆ.
ಬೆಟ್ಟದ ಮೇಲೆ ಪಾಳೆಗಾರರು ನಿರ್ಮಿಸಿದ್ದ ಕೋಟೆ ಇದೆಯಾದರೂ ಈಗ ಅದು ನಾಶವಾಗಿದೆ. ಮಳೆ ಬಂದರೆ ರಕ್ಷಣೆ ಪಡೆಯಲು ಹಾಗೂ ಅಡುಗೆ ಮಾಡಿಕೊಂಡು ಕುಳಿತು ಊಟ ಮಾಡಲು ಕೋಟೆಯಲ್ಲಿ ಸ್ಥಳಾವಕಾಶವಿದೆ. 
`ಕೋಟೆಯ ಒಳ ಭಾಗದಲ್ಲೇ ಕುಡಿಯುವ ನೀರಿಗಾಗಿ ಬಂಡೆಗಳ ಮಧ್ಯದಲ್ಲೇ ನಿರ್ಮಿಸಲಾಗಿರುವ ಹಾಲು ಬಾವಿ, ನೀರು ಬಾವಿ ಹೆಸರಿನ ಎರಡು ಕೊಳಗಳು ಇವೆ. ಇದಲ್ಲದೆ ಕೋಟೆ ಹೊರ ಭಾಗದ ಬೃಹತ್ ಬಂಡೆಯಲ್ಲಿ ಹನುಮನ ದೊಣೆ ಕೂಡ ಇದೆ. ಈ ದೊಣೆಯಲ್ಲಿ ಬೇಸಿಗೆ ಮಳೆಗಾಲ ಸೇರಿದಂತೆ ಎಂತಹ ಬರಗಾಲದಲ್ಲೂ ನೀರು ಇದ್ದೇ ಇರುತ್ತದೆ~ ಎನ್ನುತ್ತಾರೆ ಮಾಕಳಿ ಬೆಟ್ಟದಲ್ಲಿನ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದ ಭಕ್ತ ಎಂ.ದೇವರಾಜ್.
ಕಾರ್ತೀಕ ಮಾಸ ಹಾಗೂ ಮಹಾ ಶಿವರಾತ್ರಿ ಸಂದರ್ಭಗಳಲ್ಲಿ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಮಾಕಳಿ ಬೆಟ್ಟದಲ್ಲಿ ತಾಲ್ಲೂಕಿನ ಜನರಷ್ಟೇ ಅಲ್ಲದೆ ದೂರದ ತುಮಕೂರು, ಗೌರಿಬಿದನೂರು, ಬೆಂಗಳೂರು ಸೇರಿದಂತೆ ಹತ್ತಾರು ಕಡೆಗಳಿಂದ ಸಾವಿರಾರು ಜನ ಶಿವಭಕ್ತರು ಕಾಡುಮಲ್ಲೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ.
ಮಾಕಳಿ ದುರ್ಗದಲ್ಲಿ ಒಂದು ರಾತ್ರಿ ತಂಗಿದ್ದರೆ ಮಾತ್ರ ಪ್ರಕೃತಿ ಸೌಂದರ್ಯದ ಸವಿಯನ್ನು ಮನದಣಿಯೆ ಕಣ್ಣು ತುಂಬಿಕೊಳ್ಳಬಹುದು. ಬೆಳಿಗ್ಗೆ ಸೂರ್ಯ ಉದಯಿಸುವ ಹಾಗೂ ಮಾಕಳಿ ದುರ್ಗದ ಸುತ್ತಲಿನ ಬೆಟ್ಟಗಳ ಸಾಲಿನಿಂದ ಕೇಳಿ ಬರುವ ನವಿಲುಗಳ ಇಂಪಾದ ಕೂಗು ಎಂತಹವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಚಾರಣಿಗರಿಗೆ ಬೆಟ್ಟದ ಮೇಲೆ ಕುಡಿಯಲು ನೀರು, ಉಳಿದುಕೊಳ್ಳಲು ಕೋಟೆ ಒಳಗೊಂದಿಷ್ಟು ಜಾಗ ಬಿಟ್ಟರೆ ಉಳಿದ ಎಲ್ಲ ಊಟದ ಸಾಮಗ್ರಿಗಳನ್ನು ಕೊಂಡೊಯ್ಯಬೇಕು. ಬೆಳಕಿಗಾಗಿ ಮೆಣದ ಬತ್ತಿಗಳನ್ನು ತೆಗೆದುಕೊಂಡು ಹೋದರೆ ಒಳಿತು. ಬೆಟ್ಟದ ಮೇಲೆ ವಿದ್ಯುತ್ ಸೌಲಭ್ಯ ಇಲ್ಲ.
ಮಾಕಳಿ ದುರ್ಗ ಬೆಟ್ಟಕ್ಕೆ ಚಾರಣ ಹೋಗಲು ಇಂತಹದ್ದೇ `ಕಾಲ~ ಸೂಕ್ತ ಎನ್ನುವಂತೇನೂ ಇಲ್ಲ. ಮಳೆಗಾಲ, ಚಳಿಗಾಲ ಬೇಸಿಗೆ ಯಾವುದೇ ಸಮಯದಲ್ಲಿ ಚಾರಣ ಹೊರಟರು ಒಂದೊಂದು ರೀತಿಯ ಅನುಭವಗಳನ್ನು ಪಡೆಯಬಹುದಾಗಿದೆ.