ಪುಟಗಳು

ಅಪ್ಪಟ ಕನ್ನಡ ಪತ್ರಿಕೆ ಕರವೇ 'ನಲ್ನುಡಿ'ಯ ಜುಲೈ ಸೊಬಗು

ಪಕ್ಕದಲ್ಲಿದೆ ಜುಲೈ ತಿಂಗಳ ಕರವೇ ನಲ್ನುಡಿ. ಅಮಾವಾಸ್ಯೆಯ ರಾತ್ರಿಯಲ್ಲಿ ಹೊಳೆಯುವ ತಾರೆಗಳಂತೆ ಕಪ್ಪು ಹಿನ್ನೆಲೆಯಲ್ಲಿ ಬಣ್ಣಬಣ್ಣದ ಫೋಟೋಗಳಿರುವ ವಿನ್ಯಾಸ ಮತ್ತು ಕಲೆಯ ಮುದ್ರಣದ ಮುದ್ದಾದ 'ಮುಖಪುಟ'. ಮುಖವನ್ನು ಆಚೀಚೆ ಅಲ್ಲಾಡಿಸಲು ಬಿಡದಂತೆ ಚಿತ್ರಗಳಿಗೆ ಹೊಂದಿಕೊಂಡ 'ಶೀರ್ಷಿಕೆಗಳು'. ಆಹಾ!... ನಮಗೇಕೆ ಎರಡೇ ಎರಡು ಕಣ್ಣುಗಳು ಎನಿಸದಿರದು.

ಮೊದಲ ಪುಟದಲ್ಲಿ, ಪ್ರಸ್ತುತ ವಿದ್ಯಮಾನದ ವಿಷಯಕ್ಕೆ ಸಂಬಂಧಿಸಿದ, ವಿಶೇಷ ಅಧ್ಯಯನದಿಂದ ಮಂಡಿಸಲ್ಪಟ್ಟ, ಸಾಮಾಜಿಕ ಕಳಕಳಿಯಿಂದ ಕೂಡಿದ ದೂರದೃಷ್ಟಿಯುಳ್ಳ ಸಂಪಾದಕಿ ವಿಶಾಲಾಕ್ಷಿ ಅವರ ಸಂಪಾದಕೀಯ. 'ಒಳಪುಟಗಳಲ್ಲಿ ಏನೇನಿದೆ' ಎಂಬ ವಿವರಣೆ ಸಂಪಾದಕೀಯದ ಮುಂದಿನ ಪುಟದಲ್ಲಿ. ಅದು ಹತ್ತಿಯ ಮೇಲಿರುವ ಹವಳದಂತೆ. ಏನಿಲ್ಲ, ಏನಿದೆ ಅಂತ ನೋಡ ಹೊರಟರೆ ಅದೊಂದು ಫುಲ್ ಮೀಲ್ಸ್. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿರುವ ಟಿ. ಎ. ನಾರಾಯಣಗೌಡರ 'ನೇರನುಡಿ' ಯಿಂದ ಪ್ರಾರಂಭವಾಗಿ ಸಮಾಜಮುಖಿ 'ಒಡಲನುಡಿ' ಯೊಂದಿಗೆ ಕೊನೆಗೊಳ್ಳುವ ಈ ಮಾಸಿಕ ನಿಜವಾಗಿಯೂ ಒಂದು ಅಚ್ಚರಿ, ಅಮೂಲ್ಯ ರತ್ನ.

ಈ ಸಂಚಿಕೆಯ ಒಳಪುಟಗಳಲ್ಲಿ ಡಾ.ದೊಡ್ಡರಂಗೇಗೌಡ ಅವರ " ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು " ಎಂಬ ಅನುಭವದ ಹೊನ್ನುಡಿ. ಅಪ್ಪಗೆರೆ ತಿಮ್ಮರಾಜುರವರ " ಮೂಲ ಜಾನಪದ ಕಲಾವಿದರ ದುಃಖ ದುಮ್ಮಾನಗಳು ಎಂಬ ಸ್ವಾನುಭವದ ಹಿನ್ನೆಲೆಯಿಂದ ಮೂಡಿರುವ ಜಾನಪದ ಕಲಾವಿದರ ಜೀವನದ ಅನಾವರಣ. ಕರ್ನಾಟಕ ಪ್ರಶಸ್ತಿಯ ಪ್ರತಿಭೆಯಲ್ಲಿ ದೇಜಗೌ ಅವರನ್ನು ಕುರಿತ ಬರಹ. 'ಸ್ವಾಮಿಗಳು ಮಠದಲಿಲ್ಲ' ಎಂಬ ತೀರ್ಪುಗಾರರ ಮೆಚ್ಚುಗೆ ಪಡೆದಿರುವ ಕಥೆ, ಡಾ. ಜಿ.ಎಂ. ಹೆಗಡೆಯವರ ಕನ್ನಡ ಪರಿಚಾರಿಕೆ, ಕಲೆ, ಕಾವ್ಯ, ವೈಚಾರಿಕ ಲೇಖನ. ರಂಗನುಡಿ ಹೀಗೆ ಒಂದೇ ಎರಡೇ! ಸಾಕಷ್ಟು ಸಾಧ್ಯತೆಗಳ ಸಂಗ್ರಹ ಈ ಮಾಸಿಕ.

ಹಿಂದಿನ ಸಂಚಿಕೆಯನ್ನು ಹುಡುಕುವಂತೆ, ಮುಂದಿನ ಸಂಚಿಕೆಯನ್ನು ಕಾಯುವಂತೆ ಮಾಡಿರುವ ಈ ಸಂಚಿಕೆ ಈಗ ದಿನವಿಡೀ ಕಾಡುತ್ತಿರುವುದೂ ನಿಜ! ಮಾಡಲೇಬೇಕಾಗಿರುವ ಮಾಧ್ಯಮಗಳ ಕೆಲವು ಕರ್ತವ್ಯಗಳಿಗೇ ಇದು ಒಂದು ಕನ್ನಡಿ, ಮಾಡಬೇಕಾಗಿರುವ ಕೆಲಸಗಳಿಗೆ ಮನ್ನುಡಿಯೂ ಎನ್ನಬಹುದು.

'ಕರ್ನಾಟಕ ರಕ್ಷಣಾ ವೇದಿಕೆ'ಯಿಂದ ಹೊರಬರುತ್ತಿರುವ ಈ ಮಾಸಿಕ ಕರ್ನಾಟಕದ ಜನರಿಗೆ ಇದರಲ್ಲಿರುವ ವೈವಿಧ್ಯಮಯ ಬರಹಗಳ ಮೂಲಕ 'ರಕ್ಷಣೆಯ' ಬೆಚ್ಚನೆ ಭಾವವನ್ನು ಕೊಡುತ್ತಿರುವುದು ಮೆಚ್ಚಲೇಬೇಕಾದ ಅಂಶ. ಮುಂದಿನ ಸಂಚಿಕೆಗಳಲ್ಲೂ ಇದೇ ವೈವಿಧ್ಯತೆ, ಕಾಳಜಿ ಇರಲೆಂದು ಆಶಿಸುವ ಕರ್ನಾಟಕದ ಜನತೆಗೆ ನಿರಾಶೆಯಾಗಲಾರದೆಂದು ನಾವೂ ಆಶಿಸುತ್ತೇವೆ

ವಿವಾಹಿತ ವ್ಯಕ್ತಿಗಳ ಅಕ್ರಮ ಸಂಬಂಧ ಸಮ್ಮತವಲ್ಲ:ಕೋರ್ಟ್

ಮುಂಬೈ, ಜು 12: ಇಬ್ಬರು ವಿವಾಹಿತ ವ್ಯಕ್ತಿಗಳಿಗೆ ಅನೈತಿಕ ವೈವಾಹಿಕ ಸಂಬಂಧವಿರಿಸಿಕೊಳ್ಳುವ ಸ್ವಾತಂತ್ರ್ಯ ಇಲ್ಲ ಎಂದು ಮುಂಬೈ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವ್ಯಭಿಚಾರ ದಂಡನಾರ್ಹವಾಗಿರುವ ಐಪಿಸಿ ಸೆಕ್ಷನ್‌ 497ರ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಗರದ ಉದ್ಯಮಿಯೊಬ್ಬರು ಹೂಡಿದ ದಾವೆಯನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿ, ಈ ತೀರ್ಪು ನೀಡಿದೆ.

ವ್ಯಭಿಚಾರ ವಿವಾಹದ ಪವಿತ್ರತೆಗೆ ವಿರುದ್ಧವಾಗಿದೆ ಎಂದು ಪರಿಗಣಿಸಲಾಗಿದೆ. ವ್ಯಭಿಚಾರ ದಂಡನಾರ್ಹ ಅಲ್ಲವೆಂದು ಮಾಡಿದರೆ ಅನೈತಿಕ ವೈವಾಹಿಕ ಸಂಬಂಧಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಮಾಡಿದಂತಾಗುತ್ತದೆ. ಇದು ವಿವಾಹ ಸಂಬಂಧದ ಸ್ಥಿರತೆ ಮೇಲೆ ಪರಿಣಾಮ ಬೀರಲಿದೆ ಎಂದು ವಿಭಾಗೀಯ ನ್ಯಾಯಪೀಠದ ಜಸ್ಟೀಸ್‌ ಬಿ.ಎಚ್‌. ಮರ್ಲಪಳ್ಳೆ ಮತ್ತು ಯು.ಡಿ.ಸಾಳ್ವಿ ಅಭಿಪ್ರಾಯಪಟ್ಟರು.

ವಿವಾಹಿತ ಪರ ಸ್ತ್ರೀಯೊಂದಿಗೆ ಅನೈತಿಕ ಸಂಬಂಧವಿರಿಸಿದ ಆರೋಪದಲ್ಲಿ 497 ಸೆಕ್ಷನ್‌ ಪ್ರಕಾರ ಕ್ರಿಮಿನಲ್‌ ವಿಚಾರಣೆ ಎದುರಿಸುತ್ತಿರುವ ಈ ಉದ್ಯಮಿ ಅರ್ಜಿ ಹೂಡಿದ್ದರು. ಪ್ರೌಢ ವ್ಯಕ್ತಿಯೊಂದಿಗೆ ಸಹಮತದ ಲೈಂಗಿಕ ಸಂಬಂಧ ಬೆಳೆಸುವುದು ಜೀವನದ ಮೂಲಭೂತ ಹಕ್ಕಾಗಿದೆ ಎಂದು ಅವರು ವಾದಿಸಿದ್ದರು.

ಐಪಿಸಿ ಸೆಕ್ಷನ್‌ 497 ವ್ಯಕ್ತಿಯ ಸಂವಿಧಾನಬದ್ಧ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಮಂಡಿಸಿದ ವಾದಗಳಲ್ಲಿ ನಮಗೆ ಯಾವುದೇ ದೃಢವಾದ ಆಧಾರ ಸಿಕ್ಕಿಲ್ಲ. ವ್ಯಭಿಚಾರ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಅಪರಾಧವಾಗಿದೆ‌ ಎನ್ನುವ ಕಾರಣಕ್ಕೆ ಮಾತ್ರ ಐಪಿಸಿ 497 ಸೆಕ್ಷನ್‌ ಅನ್ನು ಅಸಿಂಧು ಮಾಡಲಾಗದು ಎಂದು ಮರ್ಲಪಳ್ಳೆ ಹೇಳಿದರು