ಪುಟಗಳು

ಹೊಸಗುಡ್ಡ ಗುಹಾಂತರ ದೇವಾಲಯ (ರಾಮದುರ್ಗ)

       
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಹೀಗೊಂದು ಕಾಲಕ್ಕೆ ಕೇವಲ ಹಟ್ಟಿ ಎಂಬ ಹೆಸರನ್ನು ಹೊಂದಿದ್ದ ಪಾಳೆಯಪಟ್ಟಾಗಿತ್ತು. ಈ ಹಟ್ಟಿಯನ್ನಾಳಿದ ಪಾಳೆಯಗಾರರೇ ಹಟ್ಟಿ ಪಾಳೆಯಗಾರರು ಎಂದು ಹೆಸರಾಗಿದ್ದಾರೆ. ಈ ಪಾಳೆಯಗಾರರಲ್ಲಿ ಒಬ್ಬನಾದ ಕಾಕಳನಾಯಕನೇ ಹಟ್ಟಿಯ ಮೂಲ ನಿರ್ಮಾಪಕ ಎನ್ನಲಾಗಿದೆ. ಇವನ ಮಗನೇ ದೊಡ್ಡಿಲ ಮಲ್ಲಪ್ಪನಾಯಕ. ಅವರ ಎರಡನೇ ಮಗನೇ ಬೋಡಿ ಮಲ್ಲಪ್ಪನಾಯಕ. ಚಿತ್ರದುರ್ಗದ ಚಿಕ್ಕಣ್ಣನಾಯಕನ ತಂಗಿ ಸರ್ಜಮ್ಮನಾಗತಿ ಕಾಕಳನಾಯಕನ ಹೆಂಡತಿ. ಒಮ್ಮೆ ಈ ನಾಯಕನು ಕಾಶೀಯಾತ್ರೆ ಮಾಡುತ್ತಾ, ಆನೆಗೊಂದಿ ಪಟ್ಟಣಕ್ಕೆ ಬಂದನು. ಅಲ್ಲಿ ಭೀಮಾ ಜಟ್ಟಿ ಎಂಬುವವನೊಬ್ಬನು ತನ್ನನ್ನು ಸೋಲಿಸುವರೇ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದನು. ಅಂತಹ ಜಟ್ಟಿಯನ್ನು ಕಾಕಳನಾಯಕನು ದ್ವಂದ್ವಯುದ್ಧದಲ್ಲಿ ಮಣ್ಣು ಮುಕ್ಕಿಸಿದನು. ಆನೆಗೊಂದಿಯ ರಾಯರು ಇವನ ಸಾಹಸ, ಪರಾಕ್ರಮಗಳನ್ನು ಮೆಚ್ಚಿ, ಇವನಿಗೆ ಮೂರು ಗ್ರಾಮಗಳನ್ನು ಕೊಟ್ಟು, ಹಾಗೆಯೇ ಭೀಮ ಎಂಬ ಬಿರುದು ನೀಡಿ ಸನ್ಮಾನಿಸಿದರು.
         ಮುಂದೆ ಬೋಡಿ ಮಲ್ಲಪ್ಪನಾಯಕನು ಕಾಶಿಯಿಂದ ಬೋಡಿಲಿಂಗವನ್ನು ರಾಮೇಶ್ವರದಿಂದ ಮತ್ತೊಂದು ಲಿಂಗವನ್ನು ತೆಗೆದುಕೊಂಡು ಬಂದು ರಾಮದುರ್ಗದಲ್ಲಿ ಪ್ರತಿಷ್ಟಾಪಿಸಿದನು. ನಾಯಕನಹಟ್ಟಿಯ ದಕ್ಷಿಣಕ್ಕಿರುವ ಈ ಗುಡ್ಡ ಕೋಟೆ ಕಟ್ಟಲು ಪ್ರಶಸ್ತ ಸ್ಥಳ ಎನಿಸಿದ್ದರಿಂದ ಅದನ್ನುರಾಮದುರ್ಗ ಎಂದು ಕರೆದನು. ಇದಲ್ಲದೇ ಈ ನಾಯಕನು ಏಳು ಕೆರೆ ಮತ್ತು ಒಂಭತ್ತು ಗ್ರಾಮಗಳನ್ನು ಕಟ್ಟಿಸಿದನು. ಆನೆಗೊಂದಿ ರಾಯರು ಕೊಟ್ಟ ಭೀಮ ಎಂಬ ಬಿರುದು ಸದಾಕಾಲ ಉಳಿಯುವಂತೆ ಅವನು ಕಟ್ಟಿಸಿದ ಕೆರೆಯಲ್ಲಿ ಒಂದಕ್ಕೆ ಭೀಮನಕೆರೆ ಎಂದು ಹೆಸರಿಟ್ಟನು.

(ಆಧಾರ: ಹರಿತಿ ಸಿರಿ ಲಕ್ಷ್ಮಣ್ ತೆಲಗಾವಿ)