ಪುಟಗಳು

ಮಸಾಲೆ ದೋಸೆ ಕನ್ನಡ ಕಥೆ ..

ಚಿತ್ರನಟಿ ರಮ್ಯ ..... ಚೈತ್ರ ಕಾಲ.

ಶ್ರೀ ಯಡಿಯೂರಪ್ಪ ವಿರಹಲೋಕ

HYUNA 'Bubble Pop!'

ಚಂದ್ರವಳ್ಳಿ

       
ಚಿತ್ರದುರ್ಗದ ವಾಯುವ್ಯ ಬೆಟ್ಟದ ತಪ್ಪಲಿನ ಪ್ರದೇಶವೇ ಚಂದ್ರವಳ್ಳಿ. ಅಂಕಲಿಮಠದಿಂದ ಆಂಜನೇಯಗುಡಿವರೆಗೂ ಉತ್ತರ-ದಕ್ಷಿಣಾದಿಯೋಪಾದಿಯಲ್ಲಿ ಈ ಪ್ರದೇಶ ಹಬ್ಬಿದೆ. ಈ ಪ್ರದೇಶದಲ್ಲಿ ಉತ್ಖನನ, ಭೂಸಂಶೋಧನೆ ನಡೆಸಿದಾಗ ಈ ಪ್ರದೇಶದಲ್ಲಿ ದೊರೆತ ವಸ್ತುಗಳ ನಾಣ್ಯಗಳು, ಕಟ್ಟಡದ ಅವಶೇಷಗಳಿಂದ ಇಲ್ಲಿ ಚಂದ್ರವಳ್ಳಿ (ಚಂದನಾವತಿ) ಎಂಬ ದೊಡ್ಡ ನಗರವಿದ್ದುದಾಗಿಯೂ, ಪ್ರಾಚೀನ ಸಂಸ್ಕೃತಿಯ ತಾಣವಾಗಿದ್ದಿತೆಂದು, ಈ ಸಂಸ್ಕೃತಿ ಹರಪ್ಪ, ಮೆಹೊಂಜೋದಾರ ಸಂಸ್ಕೃತಿಗೆ ಸಮಾನವೆಂದು ಸಂಶೋಧಕರ ಅಭಿಪ್ರಾಯ.
        ಇಲ್ಲಿ ದೊರೆತ ಸಾವಿರಕ್ಕೂ ಮಿಗಿಲಾದ ವಸ್ತುಗಳಿಂದ ಕ್ರಿಸ್ತ ಪೂರ್ವದಲ್ಲಿಯೇ ಚಂದ್ರವಳ್ಳಿ ಪ್ರದೇಶವು ನಾಗರೀಕವಾಗಿದ್ದಿತೆಂದು ತಿಳಿದು ಬಂದಿದೆ. ಇಲ್ಲಿ ಕ್ರಿ.ಪೂ. 139ರಲ್ಲಿ ರ್ಹ್ಯಾ ಉಂಗಿಯ ಹಿತ್ತಾಳೆ ನಾಣ್ಯ, ರೋಮ್ ಚಕ್ರವರ್ತಿಯ ಅಗಸ್ಟಸ್ ನ ಬೆಳ್ಳಿಯ ನಾಣ್ಯ, ವೀರ ಬಲ್ಲಾಳನ ನಾಣ್ಯ ದೊರೆತಿವೆ. ಇಲ್ಲಿ ದೊರೆಕಿರುವ ಶಾತವಾಹನರ ನಾಣ್ಯಗಳ ಮೇಲೆ ಪುಲುಮಾಯಿ, ಮಹಾರಥಿ ಮುಂತಾದವರ ಹೆಸರುಗಳಿವೆ. ಹಲವಾರು ಆಧಾರಗಳಿಂದ ಮೌರ್ಯ ಚಕ್ರವರ್ತಿ ಅಶೋಕನ ಕಾಲದಿಂದ ಕದಂಬರ ಮಯೂರವರ್ಮನ ಕಾಲದವರೆಗೂ ಈ ಪ್ರದೇಶದಲ್ಲಿ ಬೌದ್ಧ ಮತ ಪ್ರಚಾರದಲ್ಲಿತೆಂದು ತಿಳಿಯಬಹುದಾಗಿದೆ.
        ಇಲ್ಲಿಯ ಭೈರವೇಶ್ವರ ದೇವಾಲಯದ ಬಳಿಯ ಮಯೂರವರ್ಮನ ಶಾಸನದಿಂದ ಈ ಪ್ರದೇಶದಲ್ಲಿ ಆಗಲೇ ಇದ್ದ ತಟಾಕ(ಕೆರೆ)ಯನ್ನು ದುರಸ್ಥಿ ಮಾಡಿಸಿದನೆಂದು ತಿಳಿದು ಬರುತ್ತದೆ. ಈಗ ಅದೇ ಪ್ರದೇಶದಲ್ಲಿ ಸರ್ಕಾರವು ಸುಂದರವಾದ ಕೆರೆಯನ್ನು ಕಟ್ಟಿಸಿ ನೆನಪನ್ನು ಚಿರಸ್ಥಾಯಿಯಾಗಿಸಿದ್ದಾರೆ. ಇದೇ ಚಂದ್ರವಳ್ಳಿ ಪ್ರದೇಶದಲ್ಲಿ ಶ್ರೀ ಹುಲಿಗೊಂದಿ ಭೈರವೇಶ್ವರ ದೇವಾಲಯವು, ಚಂದ್ರವಳ್ಳಿ ಕೆರೆ, ಅಂಕಲಿಮಠ, ಪಂಚಲಿಂಗೇಶ್ವರ ಗುಹಾಂತರ ದೇವಾಲಯ, ಧವಳಪ್ಪನ ಗುಡ್ಡ, ಬಾಲಾಂಜನೇಯ ಪ್ರೇಕ್ಷಣೀಯ ಸ್ಥಳಗಳಾಗಿವೆ.
 ಪಂಚಲಿಂಗೇಶ್ವರ ದೇವಾಲಯ:
        ಹುಲಿಗೊಂದಿಯಲ್ಲಿರುವ ಪ್ರಸಿದ್ಧ ಅಂಕಲಿಮಠಕ್ಕೆ ಹೊಂದಿಕೊಂಡಂತೆ ಇರುವ ಬೃಹತ್ ಬಂಡೆಗಳ ಅಡಿಯಲ್ಲಿ ಪಾಂಡವರಿಂದ ಪ್ರತಿಷ್ಟಾಪಿಸಲ್ಪಟ್ಟಿವೆಯೆಂದು ಹೇಳಲಾಗುವ ಐದು ಲಿಂಗಗಳಿರುವ ದೇಗುಲವೇ ಈ ಪಂಚಲಿಂಗೇಶ್ವರ ದೇವಾಲಯ.

ಚಿತ್ರದುರ್ಗದ ಪ್ರಾಚ್ಯವಸ್ತು ಸಂಗ್ರಹಾಲಯ


       
ಚಿತ್ರದುರ್ಗ ಜಿಲ್ಲೆಗೆ ಒಂದು ಇತಿಹಾಸವಿದೆ. ಅದರ ಅರಿವೂ ಇಲ್ಲಿಯ ಪ್ರಾಚ್ಯಕಾಲದ ಸಂಸ್ಕೃತಿಯ ವೈಭವದ ಸ್ಮರಣೆಯೂ, ಕನ್ನಡಿಗರ ಮನದಲ್ಲಿ ಮೂಡಬೇಕು. ಭವ್ಯ ಕನ್ನಡದ ಇತಿಹಾಸ ಕಣ್ಣ ಮುಂದೆ ಕಟ್ಟಿ, ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಯುವಜನ ಸಮೂಹಕ್ಕೆ ಚೇತನದಾಯಕವಾಗಬೇಕು ಎಂಬ ಗುರಿಯನ್ನಿಟ್ಟಿಕೊಂಡು ಕೀರ್ತಿಶೇಷ ಹುಲ್ಲೂರು ಶ್ರೀನಿವಾಸ ಜೋಯಿಸರು ಜಿಲ್ಲೆಯ ಕೇಂದ್ರವಾದ ಚಿತ್ರದುರ್ಗದಲ್ಲಿ ಒಂದು ಐತಿಹಾಸಿಕ ವಸ್ತು ಸಂಗ್ರಹಾಲಯವನ್ನು ನಿರ್ಮಿಸಬೇಕೆಂಬ ಇವರ ಆಕಾಂಕ್ಷೆಗೆ, ಮೈಸೂರು ಸರ್ಕಾರವು ಸಂಗ್ರಹಾಲಯದ ಸ್ಥಾಪನೆಗೆ ಅನುಮತಿ ನೀಡಿತು. 1951ರ ಆಗಸ್ಟ್ ತಿಂಗಳಲ್ಲಿ ಮಾನ್ಯ ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರಿಂದ ಆರಂಭೋತ್ಸವವು ನೆರವೇರಿಸಲ್ಪಟ್ಟಿತು. ಅದಕ್ಕೆ ಪ್ರಥಮ ಗೌರವ ಕ್ಯೂರೇಟರವರಾಗಿ ಹುಲ್ಲೂರು ಶ್ರೀನಿವಾಸ ಜೋಯಿಸರು ನೇಮಿಸಲ್ಪಟ್ಟರು.
ಪ್ರಾಚ್ಯ ವಸ್ತುಸಂಗ್ರಹಲಾಯಗಳನ್ನು ಪ್ರವೇಶಿಸಿದಾಗ ಸಾಹಸಿಗಳೆನಿಸಿದ ಚಿತ್ರದುರ್ಗದ ಪಾಳೆಯಗಾರರ ಕಾಲದಲ್ಲಿ ಉಪಯೋಗಿಸುತ್ತಿದ್ದ ಕತ್ತಿ, ಈಟಿ, ಸುರಗಿ, ಕೈಅಂಬು, ನೂರಾರು ಶತ್ರು ಸೈನಿಕರ ಗುಂಪನ್ನು ಒಬ್ಬನೇ ಎದುರಿಸಿ ರಕ್ಷಿಸಿಕೊಳ್ಳಲು ನೆರವಾಗುತ್ತಿದ್ದ ಪರಿಘಾಯುಧ, ಚಕಮಕಿ (Flint), ಕಲ್ಲಿನಿಂದ ಬೆಂಕಿ ಉತ್ಪನ್ನವಾಗಿ ಗುಂಡು ಹಾರುತ್ತಿದ್ದ ಪಾಳೆಯಗಾರರ ಕಾಲದ ಒಂದು ಬಂದೂಕು., ಸಿಡಿಗುಂಡುಗಳು, ಮಾಯಕೊಂಡದ ಮಣ್ಣಿನಲ್ಲಿ ವೀರಾವೇಶದಿಂದ ಯುದ್ಧ ಮಾಡಿ ವೀರಸ್ವರ್ಗವನ್ನು ಪಡೆದ ಚಿತ್ರದುರ್ಗ ಪಾಳೆಯಗಾರ ಹಿರಿಯ ಮೆದಕೇರಿನಾಯಕನ ಸಮಾಧಿಯಲ್ಲಿ ದೊರೆತ ಉಕ್ಕಿನ ಕತ್ತಿ, ಪಟ್ಟದ ಕುದುರೆ ಹಲ್ಲುಗಳು, ಬಹುಮುಖ್ಯವಾದ ಸಂಗ್ರಹಗಳು. ಇದಲ್ಲದೇ ಯೋಧರ ಧರಿಸುತ್ತಿದ್ದ ಉಕ್ಕಿನ ಅಂಗಿ ಅಪೂರ್ವವಾದ ಸಂಗ್ರಹವೂ ಇಲ್ಲಿದೆ.
ಸಂಗ್ರಹಾಲಯದಲ್ಲಿ ಜೋಡಿಸಲ್ಪಟ್ಟಿರುವ ವಾರಹಿ, ಬ್ರಾಹ್ಮೀ, ಮಹೇಶ್ವರಿ, ಇಂದ್ರಾಣಿ, ಚಾಮುಂಡೇಶ್ವರಿ, ಭಿಕ್ಷಾಟನ ಶಿವ, ಸೂರ್ಯ ನಾರಾಯಣ, ಭೈರವ ಶಿಲ್ಪಗಳೆಲ್ಲವೂ ಹೊಯ್ಸಳರ ಕಾಲಕ್ಕೂ ಮುಂಚಿನವು ಎನ್ನಲಾಗಿದೆ. ದ್ವಿಬಾಹು ಗಣೇಶ, ವೀರಭದ್ರ, ಬಸವ, ನಾಗಕನ್ನಿಕಾ, ಇವುಗಳೊಂದಿಗೆ ಹಲವಾರು ಮಾಸ್ತಿ-ವೀರಗಲ್ಲುಗಳ ಸಂಗ್ರಹವೇ ಇಲ್ಲಿದೆ.
ಶಾಸನ ವಿಭಾಗದಲ್ಲಿ ಚಿತ್ರದುರ್ಗಕ್ಕೆ ಸಂಭಂಧಪಟ್ಟ ಅಮೂಲ್ಯವಾದ ಶಿಲಾಶಾಸನ ಇಲ್ಲಿದೆ. ಚಿತ್ರದುರ್ಗವೂ ಕ್ರಿ.ಶ. ಹನ್ನೊಂದನೇ ಶತಮಾನದಲ್ಲಿ ಸೂಳ್ಗಲ್ಲು ಎಂಬ ಹೆಸರು ಹೊಂದಿತ್ತೆಂಬುದಕ್ಕೆ ಈ ಶಾಸನವೇ ಸಾಕ್ಷಿ. ಚಿತ್ರದುರ್ಗದ ಪಾಳೆಯಗಾರರ ಕಾಲದ ತಾಮ್ರಪಟ್ಟ ದಾನಶಾಸನವು, ಭರಮಣ್ಣನಾಯಕನ ಘಂಟೆ ಶಾಸನವು ಮುಖ್ಯ ಸಂಗ್ರಹಗಳು.
ಚಂದ್ರವಳ್ಳಿ ಮತ್ತು ಬ್ರಹ್ಮಗಿರಿ ಪ್ರದೇಶಗಳಲ್ಲಿರುವ ಪ್ರಾಚೀನ ನಿವೇಶನಗಳ ಭೂಸಂಶೋಧನೆಯಲ್ಲಿ ದೊರೆತ ಅತ್ಯಮೂಲ್ಯ ವಸ್ತುಗಳು ಸಂಗ್ರಹಾಲಯದ ಎರಡನೇ ಕೊಠಡಿಯಲ್ಲಿವೆ. ಇವುಗಳಲ್ಲಿ ಚಂದ್ರವಳ್ಳಿಯ ರೋಮ್ ಮತ್ತು ಚೀನಾ ದೇಶದ ನಾಣ್ಯಗಳು, ಶಾತವಾಹನರ ಕಾಲದ ನಾಣ್ಯಗಳು, ಗುಹೆಗಳಲ್ಲಿ ದೊರೆತ ನವಶಿಲಾಯುಗದ ನಯವಾದ ಕಲ್ಲಿನ ಆಯುಧಗಳು, ಭೂಸಂಶೋಧನೆಯಲ್ಲಿ ದೊರೆತ ಭಾರಿ ಇಟ್ಟಿಗೆಗಳು, ವಿವಿಧ ಮಣಿಗಳು, ದಂತದ ಮತ್ತು ಗಾಜಿನ ಬಣ್ಣಬಣ್ಣದ ಬಳೆಗಳು, ಪ್ರಾಚ್ಯಕಾಲದ ಮಹಿಳೆಯರ ಅಭಿರುಚಿಯನ್ನು ವ್ಯಕ್ತಪಡಿಸುತ್ತದೆ.
 ಸಂಗ್ರಹಾಲಯದಲ್ಲಿ ಪ್ರಾಚೀನ ತಾಳೆಗರಿಗಳ ಹಸ್ತಪ್ರತಿಗಳ ಸಂಗ್ರಹಗಳಿವೆ. ಇದೇ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯ ದೊಡ್ಡೇರಿ ಗ್ರಾಮದಲ್ಲಿ ತಯಾರಿಸುತ್ತಿದ್ದ ವಿಶಿಷ್ಟ ಕಾಗದವನ್ನು ನೋಡಬಹುದು.

(ಆಧಾರ: ಚಿತ್ರದುರ್ಗ ಪ್ರಾಚ್ಯವಸ್ತು ಸಂಗ್ರಹಲಾಯ ಹೆಚ್.ಎಸ್.ಪಾಂಡುರಂಗ ಜೋಯಿಸರು)

ಚಿತ್ರದುರ್ಗದ ಕೋಟೆಯೊಳಗಿನ ಸ್ಥಳಗಳು

       













ಉಚ್ಚಂಗಮ್ಮನ ದೇವಾಲಯ:ದೊಡ್ಡಪೇಟೆ, ಚಿಕ್ಕಪೇಟೆಗಳು ಹಾಗೂ ಬೆಟ್ಟಕ್ಕೆ ಹೋಗುವ ಮಾರ್ಗ ಸಂಧಿಸುವ ಸ್ಥಳದಲ್ಲಿ ಉಚ್ಚಂಗಮ್ಮನ ಭವ್ಯಮಂದಿರವಿದೆ. ಕ್ರಿ.ಶ. 1674 ರವರೆಗೆ ಚಿತ್ರದುರ್ಗದ ಪಾಳೆಯಗಾರನಾಗಿದ್ದ ಇಮ್ಮಡಿ ಮೆದಕೇರಿನಾಯಕನು ಕ್ರಿ.ಶ. 1665 ರಲ್ಲಿ ಉಚ್ಚಂಗಿದುರ್ಗದಿಂದ ಉತ್ಸವಾಂಬೆಯ ಉತ್ಸವ ಮೂರ್ತಿಗಳನ್ನು ತಂದು ಇಲ್ಲಿ ಚಿಕ್ಕಗುಡಿ ಕಟ್ಟಿಸಿ, ಮೂರ್ತಿಗಳನ್ನು ಪ್ರತಿಷ್ಟಾಪಿಸಿದರು. ಆಗ ಗುಡಿ ಕೇವಲ 22 ಅಂಕಣಗಳಿಂದ ಕೂಡಿತ್ತು. ಮುಂದೆ ಬಿಚ್ಚುಗತ್ತಿ ಭರಮಣ್ಣನಾಯಕನು ಗುಡಿಯ ಸುತ್ತ 108 ಅಂಕಣಗಳ ಭವ್ಯ ಕಲ್ಲುಮಂಟಪಗಳನ್ನು ಐದು ಅಂತಸ್ತಿನ ಭವ್ಯ ಮಹಾದ್ವಾರವನ್ನು, ಗುಡಿಯ ಆವರಣದಲ್ಲಿ ಮಾತಂಗಿ, ಮಾವು ರಾಣಿಯರ ಎರಡು ಚಿಕ್ಕ ದೇವಮಂದಿರಗಳನ್ನು ಕಟ್ಟಿಸಿದನು. ಈ ದೇವಾಲಯದ ಎದುರಿಗೆ ಉಯ್ಯಾಲೆ ಕಂಬ, ದೊಡ್ಡ ದೀಪಾಲೆ ಕಂಬ ಹಾಗೂ ಒಂದು ಸುಂದರ ಚಿಕ್ಕ ಬಾವಿಯಿದೆ.

            ಪೂರ್ವ ದಿಕ್ಕಿಗಿರುವ ಈ ಮಹಾದ್ವಾರವು ಪಾಳೆಯಗಾರರ ಮನೆದೇವರಾದ ನೀರ್ಥಡಿ ರಂಗನಾಥನ ಹೆಸರಿನಲ್ಲಿ “ರಂಗಯ್ಯನ ಬಾಗಿಲು” ಎಂದು ಹೆಸರಾಗಿದೆ. ಇದು ಹೊರಸುತ್ತಿನ ಕೋಟೆಯ ಭಾಗವಾಗಿದ್ದು, ಇಡೀ ಊರನ್ನೇ ಸುತ್ತಿ 12 ಕಿ.ಮೀ. ಉದ್ದವಾಗಿದ್ದು, ಬೆಟ್ಟದ ಹಿಂಭಾಗವೆಂದರೆ ಆವರಿಸಿದೆ. ಈಗ ಇಲ್ಲಿ ಸರ್ಕಾರದ ಪ್ರಾಚ್ಯವಸ್ತು ಸಂಗ್ರಹಲಾಯವೂ ಇದೆ.

ದೇವಾಲಯದಲ್ಲಿ ಉತ್ಸವಾಂಬೆ (ಉಚ್ಚಂಗಮ್ಮ) ಮತ್ತು ಪರಶುರಾಮರ ಮೂರ್ತಿಗಳಿವೆ. ಕೆತ್ತನೆಗಳಿಂದ ಕೂಡಿದ ಕಲ್ಲುಮಂಟಪ ಕಲಾತ್ಮಕವಾಗಿದೆ. ದೇವಾಲಯದ ಹಿಂಭಾಗದ ಗುಪ್ತದ್ವಾರದಿಂದ ನೇರವಾಗಿ ಬೆಟ್ಟಕ್ಕೆ ಹೋಗಬಹುದು. ಪ್ರತಿವರ್ಷ ದೇವಿಯ ಸಿಡಿ ಹಾಗೂ ನವರಾತ್ರಿ ಉತ್ಸವಗಳು ನಡೆಯುತ್ತವೆ. ತಿಪ್ಪಿನಘಟ್ಟಮ್ಮ, ಬರಗೇರಮ್ಮ ಭೇಟಿ ಉತ್ಸವಗಳು ಈ ದೇವಾಲಯದ ಮುಂದೆಯೇ ನಡೆಯುತ್ತವೆ.

 ಕರಿವರ್ತಿ ಈಶ್ವರ ದೇವಾಲಯ:
            ಕಾಮನ ಬಾಗಿಲಿಂದ ಬೆಟ್ಟದ ಮೇಲಕ್ಕೆ ಹೋಗದೇ, ಕಂದಕದ ದಾರಿಯನ್ನೇ ಹಿಡಿದು ಸಾಗಿದರೆ ಶ್ರೀ ರಾಮದೇವರ ಒಡ್ಡಿಗೆ ಹೋಗುವ ಮಾರ್ಗದಲ್ಲಿ ಕರಿವರ್ತಿ ಈಶ್ವರ ದೇವಾಲಯವಿದೆ. ಈ ದೇವಾಲಯದ ಎದುರು ಒಂದು ಸುಂದರವಾದ ಪುಟ್ಟ ಕಲ್ಯಾಣ ಒಂದೊಂದಿದೆ. (ಕಹಳೆ ಬತೇರಿಯ ಪೂರ್ವಕ್ಕೆ). ಈ ದೇವಾಲಯ ಹೊಯ್ಸಳ ಶೈಲಿಯಲ್ಲಿ ಕಟ್ಟಲ್ಪಟ್ಟು, ಸುಂದರ ಭುವನೇಶ್ವರಿ ನವರಂಗಗಳಿಂದ ಕೂಡಿದ್ದು, ಇಲ್ಲಿಯ ಕಂಬಗಳ ಮೇಲೆ, ದೇವಾಲಯದ ಗೋಡೆಗಳ ಮೇಲೆ ಗೋಪಿಕಾ ಸ್ತ್ರೀಯರು, ಕಾಳಿಂಗ ಮರ್ಧನ, ನೃತ್ಯ ಗಣಪತಿ, ಮಹಿಷಾಸುರ ಮರ್ಧಿನಿ, ನರಸಿಂಹ ಮುಂತಾದ ಕೆತ್ತನೆಗಳಿಂದ ತುಂಬಿದೆ.  

 ಒಂಟಿಕಾಲು ಬಸವ:
            ಬೆಟ್ಟಕ್ಕೆ ಹೋಗುವ ಮಾರ್ಗದ ಬಲಬದಿ, ಬೆಟ್ಟದ ಏರಿಯ ಮೇಲೆ ದೊಡ್ಡ ಬಂಡೆಗೆ ಹೊಂದಿದಂತೆ ನಿಂತಿರುವ ಒಂಟಿ ಕಂಬದ ಮೇಲೆ ಪೆಟ್ಟಿಗೆಯಂತಹ ಚಿಕ್ಕ ಗುಡಿಯೊಂದಿದೆ. ಈ ಗುಡಿಯಲ್ಲಿ ಚಿಕ್ಕ ಬಸವನ ವಿಗ್ರಹ ಒಂದಿದೆ. ಇದಕ್ಕೆ ಒಂಟಿ ಕಾಲು ಬಸವನಗುಡಿ ಎನ್ನುತ್ತಾರೆ. 

 ಸಾನಂದ ಗಣಪತಿ ಮಂದಿರ:
            ಬೆಟ್ಟವನ್ನು ಹತ್ತುವಾಗ ಟೀಕಿನ ಬಾಗಿಲನ್ನು ದಾಟಿದರೆ ಏಕನಾಥೇಶ್ವರಿಯ ಪಾದಗಳು ಸಿಗುತ್ತವೆ. ಸ್ವಲ್ಪ ಮುಂದೆ ಹೋದರೆ ದೊಡ್ಡ ಬಂಡೆಯ ಮೇಲೆ ಗಣಪತಿ ವಿಗ್ರಹ ಕೆತ್ತಿ, ಒಂದು ಗುಡಿ ನಿರ್ಮಿಸಿದ್ದಾರೆ. ಇದೇ ಸಾನಂದ ಗಣಪತಿ ಮಂದಿರ. ಪಕ್ಕದಲ್ಲೇ ಗರಡಿ ಮನೆ ಎನ್ನಲಾಗುವ ಕಲ್ಲಿನ ಮಂಟಪ ಇದೆ.  

 ಬನಶಂಕರಿ ದೇವಾಲಯ:
            ಬೆಟ್ಟದ ಮೇಲೆ ಬೀಸುವ ಕಲ್ಲನ್ನು ನೋಡಲು ಹೋಗುವ ದಾರಿಯಲ್ಲಿ ಬಲಗಡೆ ಹುಟ್ಟುಬಂಡೆಯಲ್ಲಿ ನೆಲಗವಿಯಲ್ಲಿ ಬನಶಂಕರಿ ದೇವಿ ಅಂಗಹೀನಳಾಗಿ ಸರ್ವಾಲಂಕಾರ ಭೂಷಿತೆಯಾಗಿ, ಪದ್ಮಾಸೀನಳಾಗಿದ್ದಾಳೆ. ಕೋಟೆ ಕಟ್ಟುವುದಕ್ಕೆ ಮೊದಲೇ ಈ ವನದ ಮಧ್ಯೆ ದೇವಿ ನೆಲಸಿರಬೇಕು. ಈ ದೇವಾಲಯದ ಬಳಿ ಹಲವಾರು ನಾಗರ ಕಲ್ಲುಗಳಿವೆ.

 ಚಳ್ಳಕೆರೆಮ್ಮನ ಗುಡಿ:
            ಬಂಡೆಯಡಿಯೊಂದರಲ್ಲಿ ಬನಶಂಕರಿ ಗುಡಿಯ ಬಲಭಾಗದಲ್ಲಿ ಈ ಗುಡಿ ಇದೆ. ಈ ಗುಡಿಯ ಎದುರಿಗೆ ಆಳವಾದ ಗುಂಡಿಯೊಂದಿದೆ. ಇದು ಹಗೇವು ಇರಬಹುದು. ಮುಂದೆ ಕೊನೆಯ ಹಿರೇಮೆದಕೇರಿನಾಯಕನು ಇಲ್ಲಿಯ ವಿಗ್ರಹವನ್ನು ತೆಗೆದುಕೊಂಡು ಹೋಗಿ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಪ್ರತಿಷ್ಟಾಪಿಸಿದ. ಅಲ್ಲೊಂದು ದೇವಸ್ಥಾನ ನಿರ್ಮಿಸಿದನು.  

 ತುಪ್ಪದ ಕೊಳ:
            ಸಂಪಿಗೆ ಸಿದ್ದೇಶ್ವರ ದೇವಾಲಯದ ಬೃಹತ್ ಬಂಡೆಗಳ ಸಮೂಹಕ್ಕೆ ತುಪ್ಪದ ಕೊಳ ಎನ್ನುತ್ತಾರೆ. ದೇವಾಲಯದ ಪಕ್ಕದ ಚಿಕ್ಕಚಿಕ್ಕ ಪಾವಟಿಗೆಗಳ ಮೂಲಕ ಹತ್ತಿ, ಬೆಟ್ಟದ ನೆತ್ತಿಯ ಮೇಲಿನ ಬತೇರಿಗೆ ಹೋದರೆ, ಕಲ್ಲುಮಂಟಪ, ದೀಪಸ್ತಂಭ, ಏಕಶಿಲೆಯಲ್ಲಿ ಕೂಡಿದ 15-20 ಅಡಿ ಆಳದ ತುಪ್ಪದ ಕೊಳವಿದೆ. ಹಿಂದೆ ಈ ಕೊಳದಲ್ಲಿ ತುಪ್ಪ ಸಂಗ್ರಹಿಸುತ್ತಿದ್ದರಂತೆ. ಗೋಪಾಲಸ್ವಾಮಿ ಹೊಂಡದ ಬಳಿಯ ಪಾವಟಿಗೆಗಳಿಂದ ಇಳಿದು ಹೋಗಬೇಕು.  

ಏಕನಾಥೇಶ್ವರಿ ದೇವಾಲಯ:
            ಬೆಟ್ಟದ ಮೊದಲ ಸುತ್ತಿನ ಝಂಡಾ ಬತೇರಿಯ ದಕ್ಷಿಣದ ಕಡೆ ಏಕನಾಥೇಶ್ವರಿ ದೇವಾಲಯವಿದೆ. ಮೊದಲು ಬೌದ್ಧ ವಿಹಾರವಾಗಿದ್ದ ಈ ಸ್ಥಳದಲ್ಲಿ ದೇವಿ ಮುಳ್ಳು ಪೊದೆಯಲ್ಲಿ ಅಡಗಿಸಿದ್ದರಂತೆ. ಈ ಗುಹಾಂತರ ದೇವಾಲಯದ ಮುಖಮಂಟಪವನ್ನು ಪಾಳೆಯಗಾರರ ಕಾಲದಲ್ಲಿ ನಿರ್ಮಿಸಲಾಯಿತಂತೆ. ದೇವಾಲಯದ ಮುಂದೆ ಬೃಹತ್ ದೀಪಾಲೆ ಕಂಬ ಹಾಗೂ ಉಯ್ಯಾಲೆ ಕಂಭಗಳಿವೆ. ದೀಪಸ್ತಂಭದಲ್ಲಿ ದುರ್ಗದ ಎರಡನೇ ಪಾಳೆಯಗಾರ ಓಬಣ್ಣನಾಯಕ ಮತ್ತು ಈತನ ಪತ್ನಿ ಕನಕಮ್ಮ ನಾಗತಿಯ ಕೆತ್ತನೆ ಚಿತ್ರಗಳಿವೆ. ವರ್ಷಕ್ಕೊಮ್ಮೆ ದೇವಿಯ ಕಾರ್ತಿಕ ಹಾಗೂ ಸಿಡಿ ಉತ್ಸವ ನಡೆಯುತ್ತದೆ. ಗಾರೆ ಬಾಗಿಲು ಎಡಕ್ಕಿರುವ ದಿಬ್ಬದ ಮೇಲೆ ದೇವಿಯ ಪಾದಗಟ್ಟೆ ಇದೆ. 

ಸಂಪಿಗೆ ಸಿದ್ದೇಶ್ವರ ದೇವಾಲಯ:
ಚಿತ್ರದುರ್ಗದ ಬೆಟ್ಟದ ಮೇಲುದುರ್ಗದಲ್ಲಿ ಸಿದ್ದೇಶ್ವರನ ದೇವಾಲಯವಿದೆ. ದೇವಾಲಯದ ಸುತ್ತಲೂ ಕೆಂಡ ಸಂಪಿಗೆ ಸುವಾಸನೆಯ ಗಿಡಮರಗಳಿಂದ ಪಾಳೆಯಗಾರರ ಕಾಲದಲ್ಲಿ ಈ ಗುಡಿಗೆ ಸಂಪಿಗೆ ಸಿದ್ದೇಶ್ವರನ ದೇವಾಲಯವೆಂಬ ಹೆಸರು ಬಂದಿದೆ.       ತುಪ್ಪದ ಕೊಳ ಬತೇರಿಯ ತಪ್ಪಲಲ್ಲಿ ಇದೊಂದು ಪುರಾತನ ಗುಹಾಂತರ ದೇವಾಲಯವಿದೆ. ಈ ದೇವಾಲಯವಿರುವ ಗುಡ್ಡಕ್ಕೆ ಮುಕ್ತಿ ಶಿವಾಲಯ ಶಿಬಿರ ಎನ್ನುತ್ತಾರೆ. ದೇವಾಲಯ ಏಕಶಿಲಾ ಗುಹೆಯಾಗಿದ್ದು, ಉತ್ತರದಲ್ಲಿ ಕಲ್ಲುಗೋಡೆ ಮುಖಮಂಟಪವಿದೆ.     
         ಈ ದೇವಾಲಯವು ಗರ್ಭಗುಡಿ, ಸುಖನಾಸಿ, ನವರಂಗಗಳಿಂದ ಕೂಡಿದ್ದು ಗರ್ಭಗುಡಿಯಲ್ಲಿ ಅನಾದಿಕಾಲದ ಸಿದ್ದನನಾಥ ಲಿಂಗವಿದೆ. ಈ ಸಿದ್ದೇಶ್ವರ ಲಿಂಗದ ಹಿಂದೆ ಕತ್ತಲೆಯಿಂದ ಕೂಡಿದ ನಾಲ್ಕು ಕೋಣೆಗಳ ಗುಹೆ ಇದೆ. ಇಲ್ಲಿ ಅಲ್ಲಮಪ್ರಭುವಿನ ವಿಗ್ರಹವಿದೆ. ನವರಂಗದಲ್ಲಿ ಗಣೇಶ, ಶೂಲಬ್ರಹ್ಮ, ನಾಗರಕಲ್ಲುಗಳು, ನಂದಿ, ಭೈರವ ಮುಂತಾದ ಸುಂದರ ವಿಗ್ರಹಗಳಿವೆ. ಮೂಲೆಯಲ್ಲಿ ಸುಮಾರು ಐದು ಅಡಿ ಎತ್ತರದ ಕಿರೀಟದಲ್ಲಿ ಲಿಂಗ, ರಳಲ್ಲಿ ರುಂಡಮಾಲೆ ಧರಿಸಿದ, ಕರ್ಣಕುಂಡಲಧಾರಿಯಾಗಿರುವ ಸುಂದರ ವೀರಭದ್ರ ನಿಂತಿದ್ದಾನೆ. ಬಲಗಡೆ ಆಡಿನ ತಲೆಯ ದಕ್ಷಬ್ರಹ್ಮ, ನಂದಿ ವಿಗ್ರಹ, ಹಿಂದೆ ನರಸಿಂಹನ ವಿಗ್ರಹವಳಿವೆ.

ಚಿತ್ರದುರ್ಗದ ಕೋಟೆಯ ಬಾಗಿಲುಗಳು

        
ಚಿತ್ರದುರ್ಗದ ಏಳು ಸುತ್ತಿನ ಕೋಟೆಯೆಂದೊಡನೆ ಥಟ್ಟನೆ ನಮಗೆ ನೆನಪಿಗೆ ಬರುವುದು ಈ ಪ್ರಾಂತ್ಯವನ್ನು ಆಳಿದ ಪಾಳೆಯಗಾರರು. ಈ ದುರ್ಗಮ ಕೋಟೆಯನ್ನು ಪಾಳೆಯಗಾರಗಿಂತ ಮೊದಲು ಆಳ್ವಿಕೆ ನಡೆಸಿದವರು ಈ ಕೋಟೆಯ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದ್ದಾರೆ. ಸುಮಾರು 10ನೇ ಶತಮಾನದಲ್ಲಿಯೇ ಕೋಟೆಯ ನಿರ್ಮಾಣವಾಗಿರಬಹುದು ಎಂಬುವುದು ಇತಿಹಾಸಕಾರರ ಅನಿಸಿಕೆ ಕ್ರಿ.ಶ.1070 ರಲ್ಲಿಯೇ ಕೋಟೆ ಇದುದ್ದಕ್ಕೆ ಆಧಾರವಿದೆ. ಏಳು ಸುತ್ತಿನಿಂದ ಕೂಡಿರುವ ಈ ಕೋಟೆಗೆ ಏಳು ಪ್ರಮುಖ ಬಾಗಿಲುಗಳಿವೆ.
ರಂಗಯ್ಯನ ಬಾಗಿಲು:
            ಪೂರ್ವ ದಿಕ್ಕಿಗಿರುವ ಈ ಮಹಾದ್ವಾರವು ಪಾಳೆಯಗಾರರ ಮನೆದೇವರಾದ ನೀರ್ಥಡಿ ರಂಗನಾಥನ ಹೆಸರಿನಲ್ಲಿ “ರಂಗಯ್ಯನ ಬಾಗಿಲು” ಎಂದು ಹೆಸರಾಗಿದೆ. ಇದು ಹೊರಸುತ್ತಿನ ಕೋಟೆಯ ಭಾಗವಾಗಿದ್ದು, ಇಡೀ ಊರನ್ನೇ ಸುತ್ತಿ 12 ಕಿ.ಮೀ. ಉದ್ದವಾಗಿದ್ದು, ಬೆಟ್ಟದ ಹಿಂಭಾಗವೆಂದರೆ ಆವರಿಸಿದೆ. ಈಗ ಇಲ್ಲಿ ಸರ್ಕಾರದ ಪ್ರಾಚ್ಯವಸ್ತು ಸಂಗ್ರಹಲಾಯವೂ ಇದೆ.
ಸಿದ್ದಯ್ಯನ ಬಾಗಿಲು:
            ಇದಕ್ಕೆ ‘ಸಂತೆಬಾಗಿಲು’ ಎಂತಲೂ ಕರೆಯುತ್ತಾರೆ. ಗಾಂಧಿ ಸರ್ಕಲ್ ನಲ್ಲಿ [ಮಾರ್ಕೆಟ್ ಮುಂಭಾಗ] ನಿಂತು ನೋಡಿದರೆ, ಈ ಬಾಗಿಲು ಕಾಣುತ್ತದೆ. ಪಾಳೆಯಗಾರರ ಕಾಲದಲ್ಲಿ ಈ ಬಾಗಿಲು ಅಂಕಣದಲ್ಲಿ ಕುಸ್ತಿಕಾಳಗ, ಹುಲಿ ಕಾಳಗ, ಮುಂತಾದವುಗಳು ನಡೆಯುತ್ತಿದ್ದು, ಪಾಳೆಯಗಾರರು ಪುರಪ್ರಮುಖರು ಇಲ್ಲಿಯ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಒಂದು ಭಾಗದ ದ್ವಾರವನ್ನು ಮುಚ್ಚಿ, ಲಕ್ಷ್ಮಿನಾರಾಯಣಸ್ವಾಮಿ ಗುಡಿಯನ್ನಾಗಿಸಿದ್ದಾರೆ. 
ಉಚ್ಚಂಗಿ ಬಾಗಿಲು :
            ಪಾಳೆಯಗಾರರ ಮನೆದೇವತೆ ಉಚ್ಚಂಗಮ್ಮ ಈ ದೇವತೆಯ  ಹೆಸರಿನಲ್ಲೇ ಕೋಟೆಯ ಪಶ್ಚಿಮ ದಿಕ್ಕಿನ ಬಾಗಿಲಿಗೆ ಉಚ್ಚಂಗಿ ಬಾಗಿಲು ಎನ್ನುತ್ತಾರೆ. ಈ ದ್ವಾರದ ಮೂಲಕ ಸಿಹಿನೀರು ಹೊಂಡಕ್ಕೆ ಹೋಗಬಹುದು. ಈ ಬಾಗಿಲ ಬಳಿ ನರಸಿಂಹ, ಆಂಜನೇಯನ ದೇವಾಲಯಗಳಿವೆ. ಒಂದು ವೃಂದಾವನವು ಇದೆ. ಹಿಂದೆ ಈ ಹೊಂಡದಲ್ಲಿ ದೇವಿಯ ತೆಪ್ಪೋತ್ಸವ ನಡೆಯುತ್ತಿದ್ದಿತಂತೆ. ಈ ಹೊಂಡದ ನೀರನ್ನೇ ದೇವಿಯ ಅಭಿಷೇಕ್ಕೆ ಉಪಯೋಗಿಸುತಿದ್ದರಂತೆ.
ಜೋಡು ಬತೇರಿ ಬಾಗಿಲು:
            ಇದಕ್ಕೆ ಇನ್ನೊಂದು ಹೆಸರು ಲಾಲ್ ಗಡದ ಬತೇರಿ ಬಾಗಿಲು. ಲಾಲ್ ಗಡ್ ಎಂದು ಹೇಳಲು ಈ ಭಾಗದ ಕೋಟೆಗೆ ಕೆಂಪುವರ್ಣದ ಕಲ್ಲನ್ನು ಉಪಯೋಗಿಸಿರುವುದು. ಪಾಳೆಯಗಾರರ ದೇವರಾದ ಅಹೋಬಲ ನರಸಿಂಹನ ಹೆಸರಿನಿಂದಲೂ ಕರೆಯುತ್ತಾರೆ. 
ಹನುಮನ ಬಾಗಿಲು:
            ಪಾಳೆಗಾರರ ಆರಾಧ್ಯ ದೈವ ಹನುಮ. ಅವರ ಧ್ವಜವೂ ಸಹ ಹನುಮದ್ಗರುಡ ಲಾಂಛನ ಉಳ್ಳದ್ದು. ಈ ಕೋಟೆಯ ಪಶ್ಚಿಮದಲ್ಲಿ ಹನುಮಂತ ದೇವಾಲವಿದೆ. ಆದ್ದರಿಂದ ಹನುಮನ ಬಾಗಿಲೆಂತಲೂ ಕರೆಯುತ್ತಾರೆ. 
ಗಾರೆ ಬಾಗಿಲು:
            ಉಚ್ಚಂಗಮ್ಮನ ಗುಡಿಯಿಂದ ಬೆಟ್ಟದ ದಕ್ಷಿಣ ಭಾಗದಲ್ಲಿರುದೇ ಗಾರೆ ಬಾಗಿಲು ಕೋಟೆಯ ಏಳನೇ ಸುತ್ತು ಇಲ್ಲಿಂದಲೇ ಆರಂಭವಾಗುತ್ತದೆ. ನಯವಾದ ಗಾರೆಗಚ್ಚಿನಿಂದ ಕಟ್ಟಿರುವುದರಿಂದ ಗಾರೆಬಾಗಿಲು ಎನ್ನುತ್ತಾರೆ. 
ಕಾಮನ ಬಾಗಿಲು:
            ಬೆಟ್ಟಕ್ಕೇರಲು ಹಾಗೂ ಕೋಟೆಯ ಮುಖ್ಯದ್ವಾರಕ್ಕೆ ಮತ್ತು ಮೂರನೇ ಸುತ್ತಿನ ಕೋಟೆ ಪ್ರವೇಶಿಸುವ ಬಾಗಿಲೇ ಕಾಮನ ಬಾಗಿಲು. ಇಡೀ ಚಿತ್ರದುರ್ಗದ ಕೋಟೆಯ ಮಹಾದ್ವಾರಗಳಲ್ಲೇ ಅತ್ಯಂತ್ಯ ಪ್ರಮುಖ, ಸುಂದರ, ಸುಭದ್ರ, ಕಲಾತ್ಮಕ ಬಾಗಿಲು. 25 ಅಡಿ ಎತ್ತರದ ಈ ಭಾರಿ ಗೋಡೆಗಳ ಹೊರಭಾಗದಲ್ಲಿ ಆದಿಶೇಷ, ಶಿವಲಿಂಗ, ವಿಘ್ನೇಶ್ವರ, ಬಸವ, ಹಂಸ, ಕಮಲ, ಗಂಡಭೇರುಂಡ ಮುಂತಾದ ಸುಂದರ ಶಿಲ್ಪಗಳಿವೆ. ಬಾಗಿಲ ಬಳಿ ಸುಮಾರ 10 ಅಡಿ ಎತ್ತರದ ಕಲ್ಲಿನ ತೊಟ್ಟಿ ಇದೆ. ಈ ತೊಟ್ಟಿಯಲ್ಲಿ ಆನೆಗಳು ನೀರು ಕುಡಿಯುತ್ತಿದ್ದವಂತೆ. ಈ ಬಾಗಿಲ ಪಕ್ಕದಲ್ಲೇ ಒಂದು ಚೌಕಾಕಾರದ ಸುಂದರ ಹೊಂಡವಿದೆ. ಕಾಮನಬಾಗಿಲ ಬಳಿ ಇರುವುದರಿಂದ ಇದಕ್ಕೆ ‘ಕಾಮನಬಾವಿ’ ಎನ್ನುತ್ತಾರೆ.   

ಕೋಟೆಯೊಳಗಿನ ಸುತ್ತುಗಳು
ಹೊರಸುತ್ತಿನ ಕೋಟೆ:
ರಂಗಯ್ಯನ ಬಾಗಿಲು, ಲಾಲ್ ಕೋಟೆ ಬಾಗಿಲು, ಉಚ್ಚಂಗಿ ಬಾಗಿಲು, ಸಂತೆ ಬಾಗಿಲನ್ನು ಒಳಗೊಂಡಿದೆ.
ಗಾರೆ ಬಾಗಿಲು ಸುತ್ತು ಕೋಟೆ:
ಎರಡನೇ ಸುತ್ತು ಕೋಟೆಯ ಆವರಣ ಆವರಿಸಿದೆ.  
 ಕಾಮನ ಬಾಗಿಲು ಸುತ್ತು ಕೋಟೆ:
ಕೋಟೆಯ ಮೂರನೇ ಸುತ್ತನ್ನು ಒಳಗೊಂಡಿದೆ.  
 ಜಾಗಟೆ ಬಾಗಿಲು ಸುತ್ತು ಕೋಟೆ:
ಈ ನಾಲ್ಕನೇ ಸುತ್ತಿನ ಕೋಟೆಯ ಬಾಗಿಲಿಗೆ ವಿಷದ ಕತ್ತಿ ಬಾಗಿಲು ಎನ್ನುತ್ತಾರೆ.  
 ಗಂಟೆ ಬಾಗಿಲು ಸುತ್ತು ಕೋಟೆ:
ಐದನೇ ಸುತ್ತಿನ ಕೋಟೆಯ ಆವರಣ ಹೊಂದಿರುವ ಬಾಗಿಲಿಗೆ ಗಂಟೆ ಬಾಗಿಲು ಎನ್ನುತ್ತಾರೆ.  
ಟೀಕಿನ ಬಾಗಿಲು :
ಈ ಭಾಗದ ಕೋಟೆಯ ಬಾಗಿಲಿಗೆ ಕಸ್ತೂರಿ ರಂಗಪ್ಪನಾಯಕರ ಬಾಗಿಲು, ಟೀಕಿನ ಬಾಗಿಲು ಎಂದು ಕರೆಯುತ್ತಾರೆ.
 ಏಕನಾಥೇಶ್ವರಿ ಬಾಗಿಲು ಕೋಟೆ:
ಈ ಭಾಗದ ಕೋಟೆಯಲ್ಲಿ ಅರಮನೆ, ನಾಗರ, ತುಪ್ಪದ ಕೊಳ ಮುಂತಾದವುಗಳಿವೆ. ಏಕನಾಥೇಶ್ವರಿ ದೇವಾಲಯವಿದೆ. ಈ ಬಾಗಿಲಿಗೆ ಅಜ್ಜಿ ಬಾಗಿಲು ಎನ್ನುತ್ತಾರೆ.

ಪರಶುರಾಂಪುರದ ಚನ್ನಕೇಶವ ದೇವಾಲಯ

       
ಪರಶುರಾಂಪುರವು ಚಳ್ಳಕೆರೆಯಿಂದ ಪೂರ್ವಕ್ಕೆ 30 ಕಿ.ಮೀ. ದೂರದಲ್ಲಿರುವ ಆಂಧ್ರದ ಗಡಿಯಲ್ಲಿರುವ ಹೋಬಳಿ ಕೇಂದ್ರ. ದಕ್ಷಿಣಕ್ಕೆ ಊರ ಹೊರವಲಯ ಕೆರೆಯ ಕೆಳಗೆ ಚನ್ನಕೇಶವ ದೇವಸ್ಥಾನವಿದೆ. ದೇವಸ್ಥಾನದ ಎದುರಿಗೆ ಶ್ರೀ ವೈಷ್ಣವ ಪಂಥದ ಮುದ್ರೆಯನ್ನು ಸಾಂಕೇತಿಕವಾಗಿ ಸೂಚಿಸುವಂತಿರುವ ಮೂರು ಗರುಡ ಸ್ತಂಭಗಳಿವೆ. ಅವುಗಳ ಪಕ್ಕದಲ್ಲಿ ಆಳೆತ್ತರದ ನಿಲುವು ಬಂಡೆಗಳಲ್ಲಿ ಭಕ್ತಿಯಿಂದ ಕೈಮುಗಿದ ಗರುಡ ಮತ್ತು ಅದರ ಎದುರಿಗೆ ಇರುವ ಮತ್ತೊಂದು ಬಂಡೆಯಲ್ಲಿ ಹನುಮಂತನ ರೇಖಾಚಿತ್ರಗಳನ್ನು ಬಿಡಿಸಿ ಬಣ್ಣಗಳಿಂದ ತುಂಬಿದ್ದಾರೆ. ದೇವಸ್ಥಾನದ ಕಟ್ಟಡ ಸಾಧಾರಣ ಗೋಡೆಯಿಂದ ಕೂಡಿದೆ. ಆದರೆ ಗರ್ಭಗುಡಿಯಲ್ಲಿರುವ ಚನ್ನಕೇಶವ ವಿಗ್ರಹ, ಪಕ್ಕದ ಇನ್ನೊಂದು ಗರ್ಭಗುಡಿಯಲ್ಲಿರುವ ಲಕ್ಷ್ಮಿಯ ವಿಗ್ರಹ, ನವರಂಗದ ಪಕ್ಕದ ಗೋಡೆಯ ಬಳಿ ಪ್ರತಿಷ್ಟಾಪಿಸಲಾಗಿರುವ ಆಳ್ವಾರ ವಿಗ್ರಹವನ್ನು ಕಾಣಬಹುದು.

ಪರಶುರಾಂಪುರದ ಹಂಪಯ್ಯನ ಮಠ

       
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮದಿಂದ ಕೊರ್ಲಕುಂಟೆ ಗ್ರಾಮದ ಮಾರ್ಗವಾಗಿ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಕೋಟೆಕೆರೆ ಜಮೀನೊಂದರಲ್ಲಿ ಗತಕಾಲ ವೈಭವವನ್ನು ಸಾರುವ, ಈಗ ಹಾಳು ಬಿದ್ದಿರುವ ಮಠವೊಂದು ಕಣ್ಣಿಗೆ ಕಾಣುತ್ತದೆ. ಇದು ಚೋಳಕಾಲದ ಇತಿಹಾಸವನ್ನು ಸಾರುತ್ತದೆ.
         ಕೋಟೆಕೆರೆಯ ಜಿ.ಶಾಂತಪ್ಪಗೌಡರ ಜಮೀನಿನಲ್ಲಿ ಹಂಪಯ್ಯ ಎಂಬ ಸಾಧು ಕಟ್ಟಿಸಿದ ಮಠ ಎಂಬುದು ಆಧಾರವಿಲ್ಲದ ಸತ್ಯ. ಈ ಮಠವು 13 ಕಂಬಗಳಿಂದ ರಚಿಸಲ್ಪಟ್ಟಿದ್ದು, ಕಂಬಗಳ ನಾಲ್ಕು ಬದಿಯಲ್ಲಿ ವಿವಿಧ ಬಗೆಯ ಶಿಲ್ಪಕೃತಿಗಳನ್ನು ಕೆತ್ತಲಾಗಿದೆ. ಬಸವಣ್ಣ, ಹಂಪಯ್ಯ, ಲಕ್ಷ್ಮಿ, ವ್ಯಾಸ, ವೀರಭದ್ರಸ್ವಾಮಿ, ನಟರಾಜ, ಮೂರು ತಲೆ ಹಸು ಲಿಂಗಕ್ಕೆ ಹಾಲುಣಿಸುತ್ತಿರುವುದು, ಪೂರ್ಣಚಂದ್ರ, ಚಕ್ರ, ಆನೆ, ಗಣಪತಿ, ಕಾಮಧೇನು, ಹೀಗೆ ವಿವಿಧ ಭಂಗಿಗಳನ್ನು ಕಂಬಗಳಲ್ಲಿ ಚಿತ್ರಿಸಲಾಗಿದೆ. ಈ ಮಠದ ದಕ್ಷಿಣ ಭಾಗದಲ್ಲಿ 16 ಕಂಬಗಳಿದ್ದು, ಅದರಲ್ಲಿ 3 ಕಂಬಗಳು ಬಿದ್ದುಹೋಗಿದ್ದು, ಮಂಟಪದ ಸುತ್ತ ಹಾಗೂ ಒಳಗೆ ಅವನತಿಯ ಅಂಚಿನಲ್ಲಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಗಮನಹರಿಸುವುದು ಅವಶ್ಯವಾಗಿದೆ.
         ಈ ಮಠದಿಂದ ಸ್ವಲ್ಪ ಹಿಂದೆ ವೀರಭದ್ರಸ್ವಾಮಿ ದೇಗುಲವೊಂದು ಕಂಡು ಬರುತ್ತದೆ. ಈ ದೇಗುಲವೂ ಸಹ ಅದಲದಿು, ಅದರಲ್ಲಿಯೂ ಸಹ ಶಿಲ್ಪಕೃತಿಗಳು ಕಂಡು ಬರುತ್ತದೆ. ಅಲ್ಲದೇ ಸುತ್ತಮುತ್ತಲೂ ಶಾಸನಗಳು, ವೀರಗಲ್ಲುಗಳು ಕಾಣಸಿಗುತ್ತದೆ. ಗರ್ಭಗುಡಿಯ ಮುಂಭಾಗ ಮೇಲೆ ಒಂದು ಹಾವು ಚಂದ್ರನನ್ನು ನುಂಗುವ ಕಲಾಕೃತಿಯನ್ನು ನಯನ ಮನೋಹರವಾಗಿ ಕೆತ್ತಿಸಲಾಗಿದೆ. ಇತಿಹಾಸ ಸಂರಕ್ಷಣೆ ನಮ್ಮ ಕೈಯಲ್ಲಿಯೇ ಇದೆಯಾದರೆ, ಇಂತಹವುಗಳನ್ನು ನಾವು ಏಕೆ ಸಂರಕ್ಷಿಸಬಾರದು?