ಪುಟಗಳು

ಚಿತ್ರದುರ್ಗದ ಕೋಟೆಯೊಳಗಿನ ಸ್ಥಳಗಳು

       













ಉಚ್ಚಂಗಮ್ಮನ ದೇವಾಲಯ:ದೊಡ್ಡಪೇಟೆ, ಚಿಕ್ಕಪೇಟೆಗಳು ಹಾಗೂ ಬೆಟ್ಟಕ್ಕೆ ಹೋಗುವ ಮಾರ್ಗ ಸಂಧಿಸುವ ಸ್ಥಳದಲ್ಲಿ ಉಚ್ಚಂಗಮ್ಮನ ಭವ್ಯಮಂದಿರವಿದೆ. ಕ್ರಿ.ಶ. 1674 ರವರೆಗೆ ಚಿತ್ರದುರ್ಗದ ಪಾಳೆಯಗಾರನಾಗಿದ್ದ ಇಮ್ಮಡಿ ಮೆದಕೇರಿನಾಯಕನು ಕ್ರಿ.ಶ. 1665 ರಲ್ಲಿ ಉಚ್ಚಂಗಿದುರ್ಗದಿಂದ ಉತ್ಸವಾಂಬೆಯ ಉತ್ಸವ ಮೂರ್ತಿಗಳನ್ನು ತಂದು ಇಲ್ಲಿ ಚಿಕ್ಕಗುಡಿ ಕಟ್ಟಿಸಿ, ಮೂರ್ತಿಗಳನ್ನು ಪ್ರತಿಷ್ಟಾಪಿಸಿದರು. ಆಗ ಗುಡಿ ಕೇವಲ 22 ಅಂಕಣಗಳಿಂದ ಕೂಡಿತ್ತು. ಮುಂದೆ ಬಿಚ್ಚುಗತ್ತಿ ಭರಮಣ್ಣನಾಯಕನು ಗುಡಿಯ ಸುತ್ತ 108 ಅಂಕಣಗಳ ಭವ್ಯ ಕಲ್ಲುಮಂಟಪಗಳನ್ನು ಐದು ಅಂತಸ್ತಿನ ಭವ್ಯ ಮಹಾದ್ವಾರವನ್ನು, ಗುಡಿಯ ಆವರಣದಲ್ಲಿ ಮಾತಂಗಿ, ಮಾವು ರಾಣಿಯರ ಎರಡು ಚಿಕ್ಕ ದೇವಮಂದಿರಗಳನ್ನು ಕಟ್ಟಿಸಿದನು. ಈ ದೇವಾಲಯದ ಎದುರಿಗೆ ಉಯ್ಯಾಲೆ ಕಂಬ, ದೊಡ್ಡ ದೀಪಾಲೆ ಕಂಬ ಹಾಗೂ ಒಂದು ಸುಂದರ ಚಿಕ್ಕ ಬಾವಿಯಿದೆ.

            ಪೂರ್ವ ದಿಕ್ಕಿಗಿರುವ ಈ ಮಹಾದ್ವಾರವು ಪಾಳೆಯಗಾರರ ಮನೆದೇವರಾದ ನೀರ್ಥಡಿ ರಂಗನಾಥನ ಹೆಸರಿನಲ್ಲಿ “ರಂಗಯ್ಯನ ಬಾಗಿಲು” ಎಂದು ಹೆಸರಾಗಿದೆ. ಇದು ಹೊರಸುತ್ತಿನ ಕೋಟೆಯ ಭಾಗವಾಗಿದ್ದು, ಇಡೀ ಊರನ್ನೇ ಸುತ್ತಿ 12 ಕಿ.ಮೀ. ಉದ್ದವಾಗಿದ್ದು, ಬೆಟ್ಟದ ಹಿಂಭಾಗವೆಂದರೆ ಆವರಿಸಿದೆ. ಈಗ ಇಲ್ಲಿ ಸರ್ಕಾರದ ಪ್ರಾಚ್ಯವಸ್ತು ಸಂಗ್ರಹಲಾಯವೂ ಇದೆ.

ದೇವಾಲಯದಲ್ಲಿ ಉತ್ಸವಾಂಬೆ (ಉಚ್ಚಂಗಮ್ಮ) ಮತ್ತು ಪರಶುರಾಮರ ಮೂರ್ತಿಗಳಿವೆ. ಕೆತ್ತನೆಗಳಿಂದ ಕೂಡಿದ ಕಲ್ಲುಮಂಟಪ ಕಲಾತ್ಮಕವಾಗಿದೆ. ದೇವಾಲಯದ ಹಿಂಭಾಗದ ಗುಪ್ತದ್ವಾರದಿಂದ ನೇರವಾಗಿ ಬೆಟ್ಟಕ್ಕೆ ಹೋಗಬಹುದು. ಪ್ರತಿವರ್ಷ ದೇವಿಯ ಸಿಡಿ ಹಾಗೂ ನವರಾತ್ರಿ ಉತ್ಸವಗಳು ನಡೆಯುತ್ತವೆ. ತಿಪ್ಪಿನಘಟ್ಟಮ್ಮ, ಬರಗೇರಮ್ಮ ಭೇಟಿ ಉತ್ಸವಗಳು ಈ ದೇವಾಲಯದ ಮುಂದೆಯೇ ನಡೆಯುತ್ತವೆ.

 ಕರಿವರ್ತಿ ಈಶ್ವರ ದೇವಾಲಯ:
            ಕಾಮನ ಬಾಗಿಲಿಂದ ಬೆಟ್ಟದ ಮೇಲಕ್ಕೆ ಹೋಗದೇ, ಕಂದಕದ ದಾರಿಯನ್ನೇ ಹಿಡಿದು ಸಾಗಿದರೆ ಶ್ರೀ ರಾಮದೇವರ ಒಡ್ಡಿಗೆ ಹೋಗುವ ಮಾರ್ಗದಲ್ಲಿ ಕರಿವರ್ತಿ ಈಶ್ವರ ದೇವಾಲಯವಿದೆ. ಈ ದೇವಾಲಯದ ಎದುರು ಒಂದು ಸುಂದರವಾದ ಪುಟ್ಟ ಕಲ್ಯಾಣ ಒಂದೊಂದಿದೆ. (ಕಹಳೆ ಬತೇರಿಯ ಪೂರ್ವಕ್ಕೆ). ಈ ದೇವಾಲಯ ಹೊಯ್ಸಳ ಶೈಲಿಯಲ್ಲಿ ಕಟ್ಟಲ್ಪಟ್ಟು, ಸುಂದರ ಭುವನೇಶ್ವರಿ ನವರಂಗಗಳಿಂದ ಕೂಡಿದ್ದು, ಇಲ್ಲಿಯ ಕಂಬಗಳ ಮೇಲೆ, ದೇವಾಲಯದ ಗೋಡೆಗಳ ಮೇಲೆ ಗೋಪಿಕಾ ಸ್ತ್ರೀಯರು, ಕಾಳಿಂಗ ಮರ್ಧನ, ನೃತ್ಯ ಗಣಪತಿ, ಮಹಿಷಾಸುರ ಮರ್ಧಿನಿ, ನರಸಿಂಹ ಮುಂತಾದ ಕೆತ್ತನೆಗಳಿಂದ ತುಂಬಿದೆ.  

 ಒಂಟಿಕಾಲು ಬಸವ:
            ಬೆಟ್ಟಕ್ಕೆ ಹೋಗುವ ಮಾರ್ಗದ ಬಲಬದಿ, ಬೆಟ್ಟದ ಏರಿಯ ಮೇಲೆ ದೊಡ್ಡ ಬಂಡೆಗೆ ಹೊಂದಿದಂತೆ ನಿಂತಿರುವ ಒಂಟಿ ಕಂಬದ ಮೇಲೆ ಪೆಟ್ಟಿಗೆಯಂತಹ ಚಿಕ್ಕ ಗುಡಿಯೊಂದಿದೆ. ಈ ಗುಡಿಯಲ್ಲಿ ಚಿಕ್ಕ ಬಸವನ ವಿಗ್ರಹ ಒಂದಿದೆ. ಇದಕ್ಕೆ ಒಂಟಿ ಕಾಲು ಬಸವನಗುಡಿ ಎನ್ನುತ್ತಾರೆ. 

 ಸಾನಂದ ಗಣಪತಿ ಮಂದಿರ:
            ಬೆಟ್ಟವನ್ನು ಹತ್ತುವಾಗ ಟೀಕಿನ ಬಾಗಿಲನ್ನು ದಾಟಿದರೆ ಏಕನಾಥೇಶ್ವರಿಯ ಪಾದಗಳು ಸಿಗುತ್ತವೆ. ಸ್ವಲ್ಪ ಮುಂದೆ ಹೋದರೆ ದೊಡ್ಡ ಬಂಡೆಯ ಮೇಲೆ ಗಣಪತಿ ವಿಗ್ರಹ ಕೆತ್ತಿ, ಒಂದು ಗುಡಿ ನಿರ್ಮಿಸಿದ್ದಾರೆ. ಇದೇ ಸಾನಂದ ಗಣಪತಿ ಮಂದಿರ. ಪಕ್ಕದಲ್ಲೇ ಗರಡಿ ಮನೆ ಎನ್ನಲಾಗುವ ಕಲ್ಲಿನ ಮಂಟಪ ಇದೆ.  

 ಬನಶಂಕರಿ ದೇವಾಲಯ:
            ಬೆಟ್ಟದ ಮೇಲೆ ಬೀಸುವ ಕಲ್ಲನ್ನು ನೋಡಲು ಹೋಗುವ ದಾರಿಯಲ್ಲಿ ಬಲಗಡೆ ಹುಟ್ಟುಬಂಡೆಯಲ್ಲಿ ನೆಲಗವಿಯಲ್ಲಿ ಬನಶಂಕರಿ ದೇವಿ ಅಂಗಹೀನಳಾಗಿ ಸರ್ವಾಲಂಕಾರ ಭೂಷಿತೆಯಾಗಿ, ಪದ್ಮಾಸೀನಳಾಗಿದ್ದಾಳೆ. ಕೋಟೆ ಕಟ್ಟುವುದಕ್ಕೆ ಮೊದಲೇ ಈ ವನದ ಮಧ್ಯೆ ದೇವಿ ನೆಲಸಿರಬೇಕು. ಈ ದೇವಾಲಯದ ಬಳಿ ಹಲವಾರು ನಾಗರ ಕಲ್ಲುಗಳಿವೆ.

 ಚಳ್ಳಕೆರೆಮ್ಮನ ಗುಡಿ:
            ಬಂಡೆಯಡಿಯೊಂದರಲ್ಲಿ ಬನಶಂಕರಿ ಗುಡಿಯ ಬಲಭಾಗದಲ್ಲಿ ಈ ಗುಡಿ ಇದೆ. ಈ ಗುಡಿಯ ಎದುರಿಗೆ ಆಳವಾದ ಗುಂಡಿಯೊಂದಿದೆ. ಇದು ಹಗೇವು ಇರಬಹುದು. ಮುಂದೆ ಕೊನೆಯ ಹಿರೇಮೆದಕೇರಿನಾಯಕನು ಇಲ್ಲಿಯ ವಿಗ್ರಹವನ್ನು ತೆಗೆದುಕೊಂಡು ಹೋಗಿ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಪ್ರತಿಷ್ಟಾಪಿಸಿದ. ಅಲ್ಲೊಂದು ದೇವಸ್ಥಾನ ನಿರ್ಮಿಸಿದನು.  

 ತುಪ್ಪದ ಕೊಳ:
            ಸಂಪಿಗೆ ಸಿದ್ದೇಶ್ವರ ದೇವಾಲಯದ ಬೃಹತ್ ಬಂಡೆಗಳ ಸಮೂಹಕ್ಕೆ ತುಪ್ಪದ ಕೊಳ ಎನ್ನುತ್ತಾರೆ. ದೇವಾಲಯದ ಪಕ್ಕದ ಚಿಕ್ಕಚಿಕ್ಕ ಪಾವಟಿಗೆಗಳ ಮೂಲಕ ಹತ್ತಿ, ಬೆಟ್ಟದ ನೆತ್ತಿಯ ಮೇಲಿನ ಬತೇರಿಗೆ ಹೋದರೆ, ಕಲ್ಲುಮಂಟಪ, ದೀಪಸ್ತಂಭ, ಏಕಶಿಲೆಯಲ್ಲಿ ಕೂಡಿದ 15-20 ಅಡಿ ಆಳದ ತುಪ್ಪದ ಕೊಳವಿದೆ. ಹಿಂದೆ ಈ ಕೊಳದಲ್ಲಿ ತುಪ್ಪ ಸಂಗ್ರಹಿಸುತ್ತಿದ್ದರಂತೆ. ಗೋಪಾಲಸ್ವಾಮಿ ಹೊಂಡದ ಬಳಿಯ ಪಾವಟಿಗೆಗಳಿಂದ ಇಳಿದು ಹೋಗಬೇಕು.  

ಏಕನಾಥೇಶ್ವರಿ ದೇವಾಲಯ:
            ಬೆಟ್ಟದ ಮೊದಲ ಸುತ್ತಿನ ಝಂಡಾ ಬತೇರಿಯ ದಕ್ಷಿಣದ ಕಡೆ ಏಕನಾಥೇಶ್ವರಿ ದೇವಾಲಯವಿದೆ. ಮೊದಲು ಬೌದ್ಧ ವಿಹಾರವಾಗಿದ್ದ ಈ ಸ್ಥಳದಲ್ಲಿ ದೇವಿ ಮುಳ್ಳು ಪೊದೆಯಲ್ಲಿ ಅಡಗಿಸಿದ್ದರಂತೆ. ಈ ಗುಹಾಂತರ ದೇವಾಲಯದ ಮುಖಮಂಟಪವನ್ನು ಪಾಳೆಯಗಾರರ ಕಾಲದಲ್ಲಿ ನಿರ್ಮಿಸಲಾಯಿತಂತೆ. ದೇವಾಲಯದ ಮುಂದೆ ಬೃಹತ್ ದೀಪಾಲೆ ಕಂಬ ಹಾಗೂ ಉಯ್ಯಾಲೆ ಕಂಭಗಳಿವೆ. ದೀಪಸ್ತಂಭದಲ್ಲಿ ದುರ್ಗದ ಎರಡನೇ ಪಾಳೆಯಗಾರ ಓಬಣ್ಣನಾಯಕ ಮತ್ತು ಈತನ ಪತ್ನಿ ಕನಕಮ್ಮ ನಾಗತಿಯ ಕೆತ್ತನೆ ಚಿತ್ರಗಳಿವೆ. ವರ್ಷಕ್ಕೊಮ್ಮೆ ದೇವಿಯ ಕಾರ್ತಿಕ ಹಾಗೂ ಸಿಡಿ ಉತ್ಸವ ನಡೆಯುತ್ತದೆ. ಗಾರೆ ಬಾಗಿಲು ಎಡಕ್ಕಿರುವ ದಿಬ್ಬದ ಮೇಲೆ ದೇವಿಯ ಪಾದಗಟ್ಟೆ ಇದೆ. 

ಸಂಪಿಗೆ ಸಿದ್ದೇಶ್ವರ ದೇವಾಲಯ:
ಚಿತ್ರದುರ್ಗದ ಬೆಟ್ಟದ ಮೇಲುದುರ್ಗದಲ್ಲಿ ಸಿದ್ದೇಶ್ವರನ ದೇವಾಲಯವಿದೆ. ದೇವಾಲಯದ ಸುತ್ತಲೂ ಕೆಂಡ ಸಂಪಿಗೆ ಸುವಾಸನೆಯ ಗಿಡಮರಗಳಿಂದ ಪಾಳೆಯಗಾರರ ಕಾಲದಲ್ಲಿ ಈ ಗುಡಿಗೆ ಸಂಪಿಗೆ ಸಿದ್ದೇಶ್ವರನ ದೇವಾಲಯವೆಂಬ ಹೆಸರು ಬಂದಿದೆ.       ತುಪ್ಪದ ಕೊಳ ಬತೇರಿಯ ತಪ್ಪಲಲ್ಲಿ ಇದೊಂದು ಪುರಾತನ ಗುಹಾಂತರ ದೇವಾಲಯವಿದೆ. ಈ ದೇವಾಲಯವಿರುವ ಗುಡ್ಡಕ್ಕೆ ಮುಕ್ತಿ ಶಿವಾಲಯ ಶಿಬಿರ ಎನ್ನುತ್ತಾರೆ. ದೇವಾಲಯ ಏಕಶಿಲಾ ಗುಹೆಯಾಗಿದ್ದು, ಉತ್ತರದಲ್ಲಿ ಕಲ್ಲುಗೋಡೆ ಮುಖಮಂಟಪವಿದೆ.     
         ಈ ದೇವಾಲಯವು ಗರ್ಭಗುಡಿ, ಸುಖನಾಸಿ, ನವರಂಗಗಳಿಂದ ಕೂಡಿದ್ದು ಗರ್ಭಗುಡಿಯಲ್ಲಿ ಅನಾದಿಕಾಲದ ಸಿದ್ದನನಾಥ ಲಿಂಗವಿದೆ. ಈ ಸಿದ್ದೇಶ್ವರ ಲಿಂಗದ ಹಿಂದೆ ಕತ್ತಲೆಯಿಂದ ಕೂಡಿದ ನಾಲ್ಕು ಕೋಣೆಗಳ ಗುಹೆ ಇದೆ. ಇಲ್ಲಿ ಅಲ್ಲಮಪ್ರಭುವಿನ ವಿಗ್ರಹವಿದೆ. ನವರಂಗದಲ್ಲಿ ಗಣೇಶ, ಶೂಲಬ್ರಹ್ಮ, ನಾಗರಕಲ್ಲುಗಳು, ನಂದಿ, ಭೈರವ ಮುಂತಾದ ಸುಂದರ ವಿಗ್ರಹಗಳಿವೆ. ಮೂಲೆಯಲ್ಲಿ ಸುಮಾರು ಐದು ಅಡಿ ಎತ್ತರದ ಕಿರೀಟದಲ್ಲಿ ಲಿಂಗ, ರಳಲ್ಲಿ ರುಂಡಮಾಲೆ ಧರಿಸಿದ, ಕರ್ಣಕುಂಡಲಧಾರಿಯಾಗಿರುವ ಸುಂದರ ವೀರಭದ್ರ ನಿಂತಿದ್ದಾನೆ. ಬಲಗಡೆ ಆಡಿನ ತಲೆಯ ದಕ್ಷಬ್ರಹ್ಮ, ನಂದಿ ವಿಗ್ರಹ, ಹಿಂದೆ ನರಸಿಂಹನ ವಿಗ್ರಹವಳಿವೆ.