ಪುಟಗಳು

ಚಿತ್ರದುರ್ಗದ ಪ್ರಾಚ್ಯವಸ್ತು ಸಂಗ್ರಹಾಲಯ


       
ಚಿತ್ರದುರ್ಗ ಜಿಲ್ಲೆಗೆ ಒಂದು ಇತಿಹಾಸವಿದೆ. ಅದರ ಅರಿವೂ ಇಲ್ಲಿಯ ಪ್ರಾಚ್ಯಕಾಲದ ಸಂಸ್ಕೃತಿಯ ವೈಭವದ ಸ್ಮರಣೆಯೂ, ಕನ್ನಡಿಗರ ಮನದಲ್ಲಿ ಮೂಡಬೇಕು. ಭವ್ಯ ಕನ್ನಡದ ಇತಿಹಾಸ ಕಣ್ಣ ಮುಂದೆ ಕಟ್ಟಿ, ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಯುವಜನ ಸಮೂಹಕ್ಕೆ ಚೇತನದಾಯಕವಾಗಬೇಕು ಎಂಬ ಗುರಿಯನ್ನಿಟ್ಟಿಕೊಂಡು ಕೀರ್ತಿಶೇಷ ಹುಲ್ಲೂರು ಶ್ರೀನಿವಾಸ ಜೋಯಿಸರು ಜಿಲ್ಲೆಯ ಕೇಂದ್ರವಾದ ಚಿತ್ರದುರ್ಗದಲ್ಲಿ ಒಂದು ಐತಿಹಾಸಿಕ ವಸ್ತು ಸಂಗ್ರಹಾಲಯವನ್ನು ನಿರ್ಮಿಸಬೇಕೆಂಬ ಇವರ ಆಕಾಂಕ್ಷೆಗೆ, ಮೈಸೂರು ಸರ್ಕಾರವು ಸಂಗ್ರಹಾಲಯದ ಸ್ಥಾಪನೆಗೆ ಅನುಮತಿ ನೀಡಿತು. 1951ರ ಆಗಸ್ಟ್ ತಿಂಗಳಲ್ಲಿ ಮಾನ್ಯ ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರಿಂದ ಆರಂಭೋತ್ಸವವು ನೆರವೇರಿಸಲ್ಪಟ್ಟಿತು. ಅದಕ್ಕೆ ಪ್ರಥಮ ಗೌರವ ಕ್ಯೂರೇಟರವರಾಗಿ ಹುಲ್ಲೂರು ಶ್ರೀನಿವಾಸ ಜೋಯಿಸರು ನೇಮಿಸಲ್ಪಟ್ಟರು.
ಪ್ರಾಚ್ಯ ವಸ್ತುಸಂಗ್ರಹಲಾಯಗಳನ್ನು ಪ್ರವೇಶಿಸಿದಾಗ ಸಾಹಸಿಗಳೆನಿಸಿದ ಚಿತ್ರದುರ್ಗದ ಪಾಳೆಯಗಾರರ ಕಾಲದಲ್ಲಿ ಉಪಯೋಗಿಸುತ್ತಿದ್ದ ಕತ್ತಿ, ಈಟಿ, ಸುರಗಿ, ಕೈಅಂಬು, ನೂರಾರು ಶತ್ರು ಸೈನಿಕರ ಗುಂಪನ್ನು ಒಬ್ಬನೇ ಎದುರಿಸಿ ರಕ್ಷಿಸಿಕೊಳ್ಳಲು ನೆರವಾಗುತ್ತಿದ್ದ ಪರಿಘಾಯುಧ, ಚಕಮಕಿ (Flint), ಕಲ್ಲಿನಿಂದ ಬೆಂಕಿ ಉತ್ಪನ್ನವಾಗಿ ಗುಂಡು ಹಾರುತ್ತಿದ್ದ ಪಾಳೆಯಗಾರರ ಕಾಲದ ಒಂದು ಬಂದೂಕು., ಸಿಡಿಗುಂಡುಗಳು, ಮಾಯಕೊಂಡದ ಮಣ್ಣಿನಲ್ಲಿ ವೀರಾವೇಶದಿಂದ ಯುದ್ಧ ಮಾಡಿ ವೀರಸ್ವರ್ಗವನ್ನು ಪಡೆದ ಚಿತ್ರದುರ್ಗ ಪಾಳೆಯಗಾರ ಹಿರಿಯ ಮೆದಕೇರಿನಾಯಕನ ಸಮಾಧಿಯಲ್ಲಿ ದೊರೆತ ಉಕ್ಕಿನ ಕತ್ತಿ, ಪಟ್ಟದ ಕುದುರೆ ಹಲ್ಲುಗಳು, ಬಹುಮುಖ್ಯವಾದ ಸಂಗ್ರಹಗಳು. ಇದಲ್ಲದೇ ಯೋಧರ ಧರಿಸುತ್ತಿದ್ದ ಉಕ್ಕಿನ ಅಂಗಿ ಅಪೂರ್ವವಾದ ಸಂಗ್ರಹವೂ ಇಲ್ಲಿದೆ.
ಸಂಗ್ರಹಾಲಯದಲ್ಲಿ ಜೋಡಿಸಲ್ಪಟ್ಟಿರುವ ವಾರಹಿ, ಬ್ರಾಹ್ಮೀ, ಮಹೇಶ್ವರಿ, ಇಂದ್ರಾಣಿ, ಚಾಮುಂಡೇಶ್ವರಿ, ಭಿಕ್ಷಾಟನ ಶಿವ, ಸೂರ್ಯ ನಾರಾಯಣ, ಭೈರವ ಶಿಲ್ಪಗಳೆಲ್ಲವೂ ಹೊಯ್ಸಳರ ಕಾಲಕ್ಕೂ ಮುಂಚಿನವು ಎನ್ನಲಾಗಿದೆ. ದ್ವಿಬಾಹು ಗಣೇಶ, ವೀರಭದ್ರ, ಬಸವ, ನಾಗಕನ್ನಿಕಾ, ಇವುಗಳೊಂದಿಗೆ ಹಲವಾರು ಮಾಸ್ತಿ-ವೀರಗಲ್ಲುಗಳ ಸಂಗ್ರಹವೇ ಇಲ್ಲಿದೆ.
ಶಾಸನ ವಿಭಾಗದಲ್ಲಿ ಚಿತ್ರದುರ್ಗಕ್ಕೆ ಸಂಭಂಧಪಟ್ಟ ಅಮೂಲ್ಯವಾದ ಶಿಲಾಶಾಸನ ಇಲ್ಲಿದೆ. ಚಿತ್ರದುರ್ಗವೂ ಕ್ರಿ.ಶ. ಹನ್ನೊಂದನೇ ಶತಮಾನದಲ್ಲಿ ಸೂಳ್ಗಲ್ಲು ಎಂಬ ಹೆಸರು ಹೊಂದಿತ್ತೆಂಬುದಕ್ಕೆ ಈ ಶಾಸನವೇ ಸಾಕ್ಷಿ. ಚಿತ್ರದುರ್ಗದ ಪಾಳೆಯಗಾರರ ಕಾಲದ ತಾಮ್ರಪಟ್ಟ ದಾನಶಾಸನವು, ಭರಮಣ್ಣನಾಯಕನ ಘಂಟೆ ಶಾಸನವು ಮುಖ್ಯ ಸಂಗ್ರಹಗಳು.
ಚಂದ್ರವಳ್ಳಿ ಮತ್ತು ಬ್ರಹ್ಮಗಿರಿ ಪ್ರದೇಶಗಳಲ್ಲಿರುವ ಪ್ರಾಚೀನ ನಿವೇಶನಗಳ ಭೂಸಂಶೋಧನೆಯಲ್ಲಿ ದೊರೆತ ಅತ್ಯಮೂಲ್ಯ ವಸ್ತುಗಳು ಸಂಗ್ರಹಾಲಯದ ಎರಡನೇ ಕೊಠಡಿಯಲ್ಲಿವೆ. ಇವುಗಳಲ್ಲಿ ಚಂದ್ರವಳ್ಳಿಯ ರೋಮ್ ಮತ್ತು ಚೀನಾ ದೇಶದ ನಾಣ್ಯಗಳು, ಶಾತವಾಹನರ ಕಾಲದ ನಾಣ್ಯಗಳು, ಗುಹೆಗಳಲ್ಲಿ ದೊರೆತ ನವಶಿಲಾಯುಗದ ನಯವಾದ ಕಲ್ಲಿನ ಆಯುಧಗಳು, ಭೂಸಂಶೋಧನೆಯಲ್ಲಿ ದೊರೆತ ಭಾರಿ ಇಟ್ಟಿಗೆಗಳು, ವಿವಿಧ ಮಣಿಗಳು, ದಂತದ ಮತ್ತು ಗಾಜಿನ ಬಣ್ಣಬಣ್ಣದ ಬಳೆಗಳು, ಪ್ರಾಚ್ಯಕಾಲದ ಮಹಿಳೆಯರ ಅಭಿರುಚಿಯನ್ನು ವ್ಯಕ್ತಪಡಿಸುತ್ತದೆ.
 ಸಂಗ್ರಹಾಲಯದಲ್ಲಿ ಪ್ರಾಚೀನ ತಾಳೆಗರಿಗಳ ಹಸ್ತಪ್ರತಿಗಳ ಸಂಗ್ರಹಗಳಿವೆ. ಇದೇ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯ ದೊಡ್ಡೇರಿ ಗ್ರಾಮದಲ್ಲಿ ತಯಾರಿಸುತ್ತಿದ್ದ ವಿಶಿಷ್ಟ ಕಾಗದವನ್ನು ನೋಡಬಹುದು.

(ಆಧಾರ: ಚಿತ್ರದುರ್ಗ ಪ್ರಾಚ್ಯವಸ್ತು ಸಂಗ್ರಹಲಾಯ ಹೆಚ್.ಎಸ್.ಪಾಂಡುರಂಗ ಜೋಯಿಸರು)